ADVERTISEMENT

ಲಿಂಗಸುಗೂರು: ಬೆಲೆ ಏರಿಕೆಯಲ್ಲಿಯೂ ಖರೀದಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 14 ನವೆಂಬರ್ 2020, 19:31 IST
Last Updated 14 ನವೆಂಬರ್ 2020, 19:31 IST
ಲಿಂಗಸುಗೂರು ಪಟ್ಟಣದ ಅಂಗಡಿಯೊಂದರ ಮುಂದೆ ತೂಗು ಹಾಕಿದ ವಿವಿಧ ಬಗೆಯ ಅಲಂಕಾರಿಕ ವಸ್ತುಗಳು
ಲಿಂಗಸುಗೂರು ಪಟ್ಟಣದ ಅಂಗಡಿಯೊಂದರ ಮುಂದೆ ತೂಗು ಹಾಕಿದ ವಿವಿಧ ಬಗೆಯ ಅಲಂಕಾರಿಕ ವಸ್ತುಗಳು   

ಲಿಂಗಸುಗೂರು: ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಒಂದಡೆ ಪಟಾಕಿ ನಿಷೇಧ ಮಾಡಿದ್ದು ಇನ್ನೊಂದಡೆ ಅಲಂಕಾರಿಕ ಮತ್ತು ತಳಿರು ತೋರಣ ಹಾಗೂ ಅಗತ್ಯ ವಸ್ತುಗಳ ಬೆಲೆ ಮೂರು ಪಟ್ಟು ಹೆಚ್ಚಳವಾಗಿದ್ದರಿಂದ ಗ್ರಾಹಕರು ಪರದಾಡುತ್ತಿರುವ ಚಿತ್ರಣ ಕಂಡು ಬಂತು.

ಕೊರೋನಾ ವೈರಸ್‍ ಭೀತಿ ಕಡಿಮೆಯಾಗಿದ್ದು ದೀಪಾವಳಿ ಹಬ್ಬವನ್ನು ಪಟಾಕಿಗಳನ್ನು ಸಿಡಿಸಿ ಸಂಭ್ರಮದಿಂದ ಆಚರಿಸಬೇಕೆನ್ನುವ ವ್ಯಾಪಾಸ್ಥರು, ಕುಟುಂಬಸ್ಥರಿಗೆ ಪಟಾಕಿ ನಿಷೇಧ ನಿರಾಸೆ ಮೂಡಿಸಿದ ಬಗ್ಗೆ ಜನರಲ್ಲಿ ಅಸಮಾಧಾನ ಮಾತುಗಳು ಕೇಳಿಬಂದಿವೆ.

ದೀಪಾವಳಿ ಆಚರಣೆಗೆ ಅಂಗಡಿ, ಮನೆಗಳು ಸುಣ್ಣ ಬಣ್ಣದಿಂದ ಅಲಂಕಾರಗೊಂಡಿವೆ. ಲಕ್ಷ್ಮೀ ಪೂಜೆಗೆ ಅಲಂಕಾರ ಮಾಡಲು ಬಳಸುವ ಬಾಳೆದಿಂಡು, ಟೆಂಗಿನ ಗರಿಕೆ, ಕಬ್ಬು, ಆಕಾಶ ಬುಟ್ಟಿ, ಲೈಟಿಂಗ್‍, ವಿವಿಧ ಬಗೆಯ ಹೂವುಗಳ ಬೆಲೆ ನಿತ್ಯ ಮಾರುಕಟ್ಟೆಗಿಂತ ಮೂರು ಪಟ್ಟು ಹೆಚ್ಚಾಗಿದೆ. ಇದಕ್ಕೆ ಕೋವಿಡ್‍ ದುಷ್ಪರಿಣಾಮ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ADVERTISEMENT

ಬಾಳೆದಿಂಡು ಜೋಡಿಗೆ ₹ 60 ರಿಂದ ₹ 120, ಟೆಂಗಿನ ಗರಿಕೆ ಜೋಡಿಗ ₹ 80 ರಿಂದ ₹ 100.ಕಬ್ಬಿನ ಗಳ ಜೋಡಿ ₹ 60 ರಿಂದ ₹ 70. ಮಾವಿನ ಎಲೆ ಹಿಡಿಯೊಂದಕ್ಕೆ ₹ 30 ರಿಂದ ₹ 40. ಚೆಂಡು ಹೂ, ಪ್ರತಿ ಕೆ.ಜಿಗೆ ₹ 150 ರಿಂದ ₹ 200. ಇತರೆ ಹೂಗಳು ಮಾರಿಗೆ ₹ 200 ರಿಂದ ₹ 250. ಪ್ರಣತಿ ಜೋಡಿಗೆ ₹ 20 ರಿಂದ ₹ 60 ಮಾರಾಟಗೊಂಡವು.

ಮಾರುಕಟ್ಟೆಯಲ್ಲಿ ಎರಡರಿಂದ ಮೂರು ಪಟ್ಟು ಬೆಲೆ ಹೆಚ್ಚಳದಿಂದ ಬೆಚ್ಚಿಬಿದ್ದ ಗ್ರಾಹಕರು ದರ ಕಡಿಮೆ ಮಾಡಲು ಸುತ್ತಾಡುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು. ಪಟಾಕಿ ಅಂಗಡಿಗಳು ಕಾಣಸಿಗಲಿಲ್ಲ. ಅಲಂಕಾರಿಕ ಅಂಗಡಿ ಮಾಲೀಕರು, ಸಣ್ಣ ಪುಟ್ಟ ವ್ಯಾಪಾರಿಗಳು ಕೂಡ ನಿರೀಕ್ಷಿತ ವ್ಯಾಪಾರ ವಹಿವಾಟು ನಡೆಯದ್ದರಿಂದ ನಷ್ಟ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.

ಪಟಾಕಿಗಳ ಸದ್ದು: ರಾಜ್ಯ ಸರ್ಕಾರ ಪಟಾಕಿ ಮಾರಾಟ ಮತ್ತು ಬಳಕೆ ನಿಷೇಧಿಸಿ ಆದೇಶ ಹೊರಡಿಸಿದೆ. ಮಾರುಕಟ್ಟೆಯಲ್ಲಿ ಪಟಾಕಿ ಅಂಗಡಿಗಳು ಕಾಣಸಿಗುತ್ತಿಲ್ಲ. ಆದರೆ, ಎರಡು ದಿನಗಳಿಂದ ಪಟ್ಟಣದ ಬಹುತೇಕ ಕಡೆಗಳಲ್ಲಿ ಪಟಾಕಿಗಳ ಸದ್ದು ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.