ತುರ್ವಿಹಾಳ: ಪಟ್ಟಣ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಲ್ಲಿ ಬೆಳಕಿನ ಸಂಕೇತವಾದ ದೀಪಾವಳಿ ಹಬ್ಬವನ್ನು ಸೋಮವಾರ ಜನರು ಸಡಗರ ಸಂಭ್ರಮದಿಂದ ಆಚರಿಸಿದರು
ದೀಪಾವಳಿ ಹಬ್ಬವನ್ನು ನಿನ್ನೆ ಭಾನುವಾರ ನರಕ ಚತುರ್ದಶಿಯನ್ನಾಗಿ ಆಚರಿಸಿದರೆ, ಸೋಮವಾರ ಅಮವಾಸ್ಯೆ ದಿನ ಮಹಾಲಕ್ಷ್ಮಿ ಪೂಜೆಯನ್ನು ಭಕ್ತಿಯಿಂದ ಜೋರಾಗಿ ಆಚರಿಸುವ ದೃಶ್ಯ ಪಟ್ಟಣದಲ್ಲಿ ಕಂಡು ಬಂತು.
ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರು ಪೂಜಾ ಸಾಮಾಗ್ರಿ ಖರೀದಿಸಲು ಮಾರುಕಟ್ಟೆಗೆ ಮುಗಿ ಬಿದ್ದರು. ವಸ್ತುಗಳ ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿತ್ತು ಸಂತೆ ಮೈದಾನ, ಬಸ್ ನಿಲ್ದಾಣದ ಸುತ್ತಮುತ್ತ ಹೆಚ್ಚಿನ ಜನ ಜಂಗುಳಿ ಕಂಡು ಬಂತು.
ಮಲ್ಲಿಗೆ ಹೂವು ಒಂದು ಮಾರಿಗೆ ₹ 150, ಚಂಡು ಹೂವು ₹ 50, ಬಾಳೆಹಣ್ಣು ಕೆ.ಜಿ ಗೆ ₹ 50, ಸೇಬು ₹ 130, ಕಿತ್ತಾಳೆ ₹ 80, ದ್ರಾಕ್ಷಿ ₹ 150, ದಾಳಿಂಬೆ ₹ 100, ಸೀತಾಫಲ ₹ 100, ಬಾಳೆಗಿಡ ಜತೆಗೆ ₹ 50, ಅಡಕೆ ಗಿಡದ ಹೂವು ಒಂದು ಕಟ್ಟಿಗೆ ₹ 50, ಕಬ್ಬು ಜತೆಗೆ ₹ 50 ಕ್ಕೆ ಮಾರಾಟವಾಗಿದೆ ಎನ್ನುತ್ತಾರೆ ಬೀದಿ ಬದಿ ವ್ಯಾಪಾರಿ ಮಾಯಮ್ಮ ಭಜಂತ್ರಿ
ನಾಳೆ ಬಲಿಪಾಡ್ಯಮಿಯಂದು ಮನೆ ಸ್ವಚ್ಛಗೊಳಿಸಿ ಸೆಗಣಿಯಿಂದ ಪಾಂಡವರನ್ನು ತಯಾರಿಸಿ ವಿಶೇಷ ಪೂಜೆ ನೇರವೆರಿಸಿ, ನಂತರ ಹೊಸ ಬಟ್ಟೆ ಧರಿಸಿ ಸಂಬಂಧಿಕರೊಂದಿಗೆ ವಿಶೇಷವಾಗಿ ಹೊಳಿಗೆ ಊಟವನ್ನು ಸವಿಯುತ್ತೇವೆ ಎಂದು ಮಾಂತೇಶ ಸಜ್ಜನ ಹೇಳಿದರು
ಪರಿಸರ ಮಾಲಿನ್ಯದ ದುಷ್ಟರಿಣಾಮಗಳ ಜಾಗೃತಿ ಇರುವುದರಿಂದ ಈ ಬಾರಿ ನಾವು ಪಟಾಕಿ ಖರೀದಿಸಿಲ್ಲ. ಹಿಂದಿನ ವರ್ಷಕ್ಕಿಂತ ಹೆಚ್ಚು ದೀಪಗಳನ್ನು ಈ ಬಾರಿ ಹಚ್ಚಿ ಸಂಭ್ರಮಿಸುತ್ತೇವೆ ಎಂದು ಚಿನ್ನದ ಅಂಗಡಿ ವ್ಯಾಪಾರಿ ಶಶಿಧರ ಪತ್ತಾರ ತಿಳಿಸಿದರು
ಕೆಲವು ಅಂಗಡಿಗಳಲ್ಲಿ ಭಾನುವಾರ ಕೇಲವರು ಸೋಮವಾರ ಮಹಾಲಕ್ಷ್ಮಿ ಪೂಜೆ ಆಚರಿಸುವುದು ಕಂಡು ಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.