ADVERTISEMENT

ಒಡಿಸ್ಸಾದ ಬಾಲಸೊರ್‌ ರೈಲ್ವೆ ದುರಂತ: ಕೇಂದ್ರ ರೈಲ್ವೆ ಸಚಿವ ತಕ್ಷಣ ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 16:15 IST
Last Updated 4 ಜೂನ್ 2023, 16:15 IST

ಸಿಂಧನೂರು: ಒಡಿಸ್ಸಾದ ಬಾಲಸೊರ್‌ ಬಳಿ ತ್ರಿವಳಿ ರೈಲ್ವೆ ದುರಂತದಲ್ಲಿ 300 ಜನರು ಸಾವನ್ನಪ್ಪಿ, 900 ಜನರು ಗಾಯಗೊಂಡಿರುವ ಘಟನೆಯ ನೈತಿಕ ಹೊಣೆ ಹೊತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಸಿಪಿಐ(ಎಂಎಲ್) ಆರ್‌ಐ ರಾಜ್ಯ ಘಟಕದ ಕಾರ್ಯದರ್ಶಿ ಡಿ.ಎಚ್.ಪೂಜಾರ್ ಹಾಗೂ ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ಎನ್.ಯರದಿಹಾಳ ಆಗ್ರಹಿಸಿದ್ದಾರೆ.

ಭಾನುವಾರ ಜಂಟಿಯಾಗಿ ಹೇಳಿಕೆ ನೀಡಿರುವ ಅವರು ‘ಒಂದು ರೈಲ್ವೆ ಹಳಿ ತಪ್ಪಿದೆ ಎಂದು ಗೊತ್ತಾದ ಮೇಲೆ ಅದರ ವ್ಯಾಪ್ತಿಗೆ ಬರುವಂತಹ ಎಲ್ಲ ಜಂಕ್ಷನ್‍ಗಳಿಗೆ ಸುದ್ದಿ ತಿಳಿಸುವ ಜವಾಬ್ದಾರಿ ರೈಲ್ವೆ ಆಡಳಿತ ಮಂಡಳಿ ಅವರದಾಗಿರುತ್ತದೆ. ಯಾವ ಮಾಹಿತಿಯನ್ನು ತಿಳಿಸದೆ ಏಕಕಾಲಕ್ಕೆ ಮೂರು ಕಡೆಯಿಂದ ರೆಲ್ವೆಗಳು ಬಂದು ಟಕ್ಕರ್ ಕೊಟ್ಟಿರುವುದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ವ್ಯವಸ್ಥಿತ ಉದ್ದೇಶಿತ ದುರಂತ ಇದಾಗಿದೆ’ ಎಂದು ಆರೋಪಿಸಿದ್ದಾರೆ.

‘ದುರಂತ ನಡೆದ ಸ್ಥಾನಿಕ ಸ್ಥಳದಲ್ಲಿ ಸತ್ತ ಪ್ರಯಾಣಿಕರನ್ನು ಪ್ರಾಣಿಗಳಂತೆ ಎಸೆಯುವುದು ಅನಾಗರಿಕರ ಸಂಸ್ಕೃತಿಯಾಗಿದೆ. ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತ ರೀತಿಯಲ್ಲಿ ಮರಣ ಹೊಂದಿದ ಪ್ರಯಾಣಿಕರಿಗೆ ಅಗೌರವ ತೋರಿಸಿದ್ದು ಅಕ್ಷಮ್ಯ ಅಪರಾಧವಾಗಿದೆ. ಅಲ್ಲಿಯ ಸಿಬ್ಬಂದಿಯ ಮೇಲೆ ಈ ಕೂಡಲೇ ಕೇಸ್ ದಾಖಲಿಸಬೇಕು. ಮರಣ ಹೊಂದಿದ ಪ್ರಯಾಣಿಕರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು. ಗಾಯಾಳುಗಳಿಗೆ ಹೈಟೆಕ್ ಚಿಕಿತ್ಸೆ ನೀಡಿ ಗುಣಪಡಿಸಬೇಕು. ಈ ದುರ್ಘಟನೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ಇದರ ಹೊಣೆಗಾರಿಕೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೊತ್ತುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.