ಹಿರೇಹಣಿಗಿ (ಕವಿತಾಳ): ನಾರಾಯಣಪುರ ಬಲದಂಡೆ ಕಾಲುವೆಯ 9 (ಎ) ವಡವಟ್ಟಿ ಶಾಖಾ ಕಾಲುವೆಯಿಂದ 6.290 ಕಿ.ಮೀ ವರೆಗೆ ಕಾಮಗಾರಿಯನ್ನು ಆರಂಭಿಸುವಂತೆ ರೈತರು ಆಗ್ರಹಿಸಿದರು.
ಸಿರವಾರ ತಾಲ್ಲೂಕಿನ ಹಿರೇಹಣಿಗಿ ಗ್ರಾಮದಲ್ಲಿ ಈಚೆಗೆ ಸಭೆ ನಡೆಸಿದ ರೈತರು ಕಾಮಗಾರಿ ಆರಂಭಕ್ಕೆ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಅಮರೇಶ ಚಾಗಭಾವಿ ಮಾತನಾಡಿ ‘ಕಾಮಗಾರಿಯನ್ನು ಗುತ್ತಿಗೆ ಪಡೆದ ಇಬ್ಬರು ಗುತ್ತಿಗೆದಾರರಿಗೆ 2017 ಅ.8 ರ ಒಳಗಾಗಿ ಟೆಂಡರ್ ಒಪ್ಪಂದ ಮಾಡಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದರೂ ಗುತ್ತಿಗೆದಾರರು ಒಪ್ಪಂದ ಮಾಡಿಕೊಂಡಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷದಿಂದ ಕಾಮಗಾರಿ ವಿಳಂಬವಾಗಿ ಕವಿತಾಳ, ಕಲಂಗೇರಾ, ಚಿಕ್ಕಬಾದರದಿನ್ನಿ, ಹಿರೇಹಣಿಗಿ, ಪಾತಾಪುರ, ಮಲ್ಲಟ, ಯು.ಗುಡಡದಿನ್ನಿ ಸೇರಿದಂತೆ 8 ಹಳ್ಳಿಗಳ ವ್ಯಾಪ್ತಿಯ ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ’ ಎಂದು ಆರೋಪಿಸಿದರು.
‘ಈ ಕೂಡಲೇ ಅಧಿಕಾರಿಗಳು ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳದಿದ್ದರೆ ಜ.10 ರಿಂದ ಹೋರಾಟ ಆರಂಭಿಸಲಾಗುವುದು’ ಎಂದು ಹೇಳಿದರು.
ರೈತ ಮುಖಂರಾದ ತಿಮ್ಮನಗೌಡ, ಶಂಕರಗೌಡ ಗುಡದಿನ್ನಿ, ಲಿಂಗಣ್ಣ ನಾಸಲ್, ಅಮರಯ್ಯಸ್ವಾಮಿ, ದುರುಗಪ್ಪ ಮತ್ತು ವಿವಧ ಹಳ್ಳಿಗಳ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.