ತುರ್ವಿಹಾಳ: ಪಟ್ಟಣದಲ್ಲಿರುವ ಪಶು ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿ ಜಾನುವಾರುಗಳ ಹಿತರಕ್ಷಣಾ ಹೋರಾಟ ಒಕ್ಕೂಟದ ಮುಖಂಡರು ಬುಧವಾರ ಪ್ರತಿಭಟನಾ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಉಪತಶೀಲ್ದಾರ್ಗೆ ಮನವಿ ಸಲ್ಲಿಸಿದರು.
ತುರ್ವಿಹಾಳ ಪಟ್ಟಣ ಒಳಗೊಂಡು ಕಲ್ಮಂಗಿ, ಗುಂಜಳ್ಳಿ, ಊಮಲೂಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 36 ಗ್ರಾಮಗಳ ರೈತರು ಹಾಗೂ ಕುರಿಗಾಹಿಗಳು ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ತುರ್ವಿಹಾಳ ಕೇಂದ್ರವನ್ನೇ ಅವಲಂಭಿಸಿದ್ದಾರೆ. ಆದರೆ, ಕಾಯಂ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೆ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಸಂಘಟನೆಯ ಅಧ್ಯಕ್ಷ ಶಂಕರಗೌಡ ದೇವರಮನಿ ದೂರಿದರು.
ಕಾಲುಬಾಯಿ ರೋಗ, ಗಳಲೆ ರೋಗ, ಚಪ್ಪಡಿ ರೋಗ, ನರಡಿ ರೋಗ ಸೇರಿ ಅನೇಕ ರೋಗಗಳಿಗೆ ಜಾನುವಾರುಗಳು ತುತ್ತಾಗುತ್ತಿವೆ ಎಂದರು.
ರೈತ ಮುಖಂಡ ಚಂದ್ರು ಪವಾಡಶೆಟ್ಟಿ ಮಾತನಾಡಿ, ಈಗಿನ ಅಧಿಕಾರಿ ಶೇಖಾವಲಿ ಅವರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಸಾಂಕ್ರಾಮಿಕ ರೋಗಗಳಿಗೆ ನೀಡುವ ಲಸಿಕೆಗಳು ಲಭ್ಯವಿಲ್ಲ ಎಂದು ಸುಳ್ಳು ಹೇಳುತ್ತಾರೆ ಎಂದು ಆರೋಪಿಸಿದರು
ಈ ಬಗ್ಗೆ ಹಲವು ಬಾರಿ ತಾಲ್ಲೂಕು ಅಧಿಕಾರಿಗಳಗೆ ಮನವಿ ಸಲಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಶೇಖಾವಲಿ ಅವರನ್ನು ವರ್ಗಾವಣೆ ಮಾಡಿ, ಬೇರೆ ವೈದ್ಯರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಉಪಾಧ್ಯಕ್ಷ ಕಾಂತಪ್ಪ ಕಲ್ಮಂಗಿ, ಕಾರ್ಯದರ್ಶಿ ರಾಮಣ್ಣ ಕಾನಿಹಾಳ, ಸಹ ಕಾರ್ಯದರ್ಶಿ ನಿಂಗಪ್ಪ ಚಂಚರ, ಖಜಾಂಚಿ ಮಲ್ಲಯ್ಯ ಗೋರೆಬಾಳ, ಮಹಾದೇವ ಗೋನಾಳ, ಬಸಪ್ಪ ಕರಡಿ,ಯಂಕಪ್ಪ, ನವಾಬ್ ಶರೀಪ್, ವಿರುಪಣ್ಣ, ಹನುಮಂತ, ಕರಿಯಪ್ಪ, ಶರಣಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.