ADVERTISEMENT

ತಹಶೀಲ್ದಾರ್ ಅಮಾನತಿಗೆ ಆಗ್ರಹ

ಕೆಆರ್‌ಎಸ್ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 17:15 IST
Last Updated 29 ಸೆಪ್ಟೆಂಬರ್ 2020, 17:15 IST
ಮಾನ್ವಿಯಲ್ಲಿ ಮಂಗಳವಾರ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು
ಮಾನ್ವಿಯಲ್ಲಿ ಮಂಗಳವಾರ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು   

ಮಾನ್ವಿ : ತಹಶೀಲ್ದಾರ್ ಅಮರೇಶ ಬಿರಾದಾರ ಅಮಾನತಿಗೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸವ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ಮಹಿಳಾ ಶಿರಸ್ತೇದಾರರೊಬ್ಬರಿಗೆ ತಹಶೀಲ್ದಾರ್ ಅಮರೇಶ ಬಿರಾದಾರ ಲೈಂಗಿಕ ಕಿರುಕುಳ ನೀಡಿದ್ದರು. ಅವರ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಸೇವೆಯಿಂದ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ನೊಂದ ಮಹಿಳೆ ಖುದ್ದಾಗಿ ದೂರು ಸಲ್ಲಿಸಲು ಪೊಲೀಸ್ ಠಾಣೆಗೆ ತೆರಳಿದ್ದರೂ, ಪ್ರಕರಣ ದಾಖಲಿಸದ ಮಾನ್ವಿ ಪಿಎಸ್‍ಐ ಸಿದ್ದರಾಮ ಬಿದರಾಣಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಶಿರಸ್ತೇದಾರ ತುಳಜಾರಾಮ ಸಿಂಗ್ ಅವರಿಗೆ ಸಲ್ಲಿಸಲಾಯಿತು. ಜಿಲ್ಲಾ ಕರ್ನಾಟಕ ರೈತ ಸಂಘದ ಅಧ್ಯಕ್ಷ ಅಶೋಕ್ ನಿಲೋಗಲ್, ತಾಲ್ಲೂಕು ಅಧ್ಯಕ್ಷ ವಿ.ಮುದುಕಪ್ಪ ನಾಯಕ, ಯಲ್ಲಪ್ಪ ಉಟಕನೂರು, ಆನಂದ ಭೋವಿ, ವೀರೇಶ ನಾಯಕ, ಅಮರೇಶ ನಾಯಕ, ಮಲ್ಲಯ್ಯ ಕೆ.ಗುಡದಿನ್ನಿ, ದ್ಯಾಮಪ್ಪ, ವೆಂಕಟೇಶ ನಾಯಕ, ರಮೇಶ, ಹುಲಿಗೆಪ್ಪ ಸಿರವಾರ, ಚಂದ್ರು, ಮಾರೆಪ್ಪ, ಶಿವಯ್ಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಆಗ್ರಹ: ತಹಶೀಲ್ದಾರ್ ಅಮರೇಶ ಬಿರಾದಾರ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಮಂಗಳವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಮಟ್ಟದ ದೂರು ನಿವಾರಣಾ ಸಮಿತಿಯ ಅಧ್ಯಕ್ಷರು ಪ್ರಕರಣದ ವಿಚಾರಣೆ ನೆಪದಲ್ಲಿ ವಿಳಂಬ ಮಾಡದೆ ತನಿಖೆಯನ್ನು ಚುರುಕುಗೊಳಿಸಬೇಕು. ತಹಶೀಲ್ದಾರ್ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳಾ ಶಿರಸ್ತೇದಾರಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಯಲ್ಲಪ್ಪ ಬಾದರದಿನ್ನಿ, ಪಿ.ರವಿಕುಮಾರ, ಶಿವರಾಜ ಜಾನೇಕಲ್, ಶಿವರಾಜ ಉಮಳಿಹೊಸೂರು, ನರಸಪ್ಪ ಜೂಕೂರು, ಹನುಮಂತರಾಯ ಕಪಗಲ್, ಹನುಮಂತ ಸೀಕಲ್, ನರಸಿಂಹ ರಾಜೋಳ್ಳಿ, ಎಂ.ಬಿ.ನಾಯಕ ಉದ್ಬಾಳ, ಬುಡ್ಡಪ್ಪ ನಾಯಕ ಮಲ್ಲಿನಮಡುಗು, ಗಂಗಾಧರ ಬಾಗಲವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.