ADVERTISEMENT

ಹೈಕಮಾಂಡ್‌ ಶಿಫಾರಸು ಇದ್ದರೂ ಸಂಪುಟದಿಂದ ಕೈಬಿಡಲಾಗಿದೆ: ಶಾಸಕ ಶಿವನಗೌಡ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 13:59 IST
Last Updated 12 ಆಗಸ್ಟ್ 2021, 13:59 IST
ಕೆ.ಶಿವನಗೌಡ ನಾಯಕ
ಕೆ.ಶಿವನಗೌಡ ನಾಯಕ   

ರಾಯಚೂರು: ‘ಸಚಿವ ಸ್ಥಾನ ನೀಡುವಂತೆ ರಾಷ್ಟ್ರೀಯ ನಾಯಕರು ಶಿಫಾರಸು ಮಾಡಿದ್ದರೂ ರಾಜ್ಯದ ಕೆಲವು ನಾಯಕರು ಕತ್ತರಿ ಹಾಕಿದ್ದಾರೆ. ನಾಲ್ಕು ಬಾರಿ ಶಾಸಕನಾಗಿ, ಪಕ್ಷಕ್ಕೆ ನಿಷ್ಠನಾಗಿದ್ದರೂ ನನಗೆ ಸಚಿವ ಸ್ಥಾನ ಸಿಗಲಿಲ್ಲ’ ಎಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅಸಮಾಧಾನ ಹೊರಹಾಕಿದರು.

ಗುರುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ. ಪರಿಶಿಷ್ಟ ಪಂಗಡಕ್ಕೆ ಕನಿಷ್ಠ ಮೂರು ಸ್ಥಾನ ನೀಡಬೇಕಿತ್ತು. ರಮೇಶ ಜಾರಕಿಹೊಳಿ ಅವರಿಗೆ ಎಸ್‌ಟಿ ಕೋಟಾದಲ್ಲಿ ಸಚಿವಸ್ಥಾನ ನೀಡುವುದಲ್ಲ. ಬಿಜೆಪಿ ಅಧಿಕಾರಕ್ಕೆ ಬರಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದಾರೆ. ಹೀಗಾಗಿ ಅವರಿಗೆ ಸಚಿವಸ್ಥಾನ ನೀಡಲೇಬೇಕು’ ಎಂದು ತಿಳಿಸಿದರು.

‘ಎಸ್‌ಟಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸುವುದಕ್ಕಾಗಿ ಹಾಗೂ ಪ್ರಾದೇಶಿಕ ಅಸಮತೋಲನೆ ನಿರಾರಿಸಲು ಎಸ್‌ಟಿ ಶಾಸಕರಿಗೆ ಸಚಿವಸ್ಥಾನ ನೀಡಲೇಬೇಕು. ನೂತನ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವರಿಕೆ ಮಾಡಲಾಗಿದ್ದು, ಅನ್ಯಾಯವನ್ನು ಸರಿಪಡಿಸುವ ವಿಶ್ವಾಸವಿದೆ. ಅವಧಿ ಪೂರ್ಣವಾಗುವವರೆಗೂ ಅಧಿಕಾರ ನಡೆಸಲು ಮುಖ್ಯಮಂತ್ರಿ ಸಮರ್ಥರಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT