
ಬಂಧನ
ಸಿಂಧನೂರು: ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇಲೆ ಶಹರ ಠಾಣೆ ಪೊಲೀಸರು ಬಳ್ಳಾರಿ ಜಿಲ್ಲೆಯ ಕೃಷ್ಣನಗರ ಕ್ಯಾಂಪ್ನ ನಾಲ್ವರನ್ನು ಬಂಧಿಸಿದ್ದಾರೆ.
ನಗರದ ರಾಮಕಿಶೋರ ಕಾಲೊನಿ ನಿವಾಸಿ ಸೂರ್ಯಬಾಬು ಅವರ ಪುತ್ರಿ ಅಮೂಲ್ಯ ಅವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
‘ಮದುವೆ ಸಮಯದಲ್ಲಿ ಕಡಿಮೆ ವರದಕ್ಷಿಣೆ ನೀಡಿದ್ದು, ಹೆಚ್ಚಿನ ವರದಕ್ಷಿಣೆಯಾಗಿ ತಂದೆಯ ಆಸ್ತಿಯಲ್ಲಿ ಬರುವ ಭಾಗವನ್ನು ನಿನ್ನ ಹೆಸರಿಗೆ ಮಾಡಿಸಿಕೊ ಎಂದು ಕೃಷ್ಣ ಚೈತನ್ಯ ನನ್ನ ಮೇಲೆ ಒತ್ತಡ ಹಾಕಿದ್ದಾರೆ. ನನ್ನ ತಂದೆ–ತಾಯಿ, ಅಣ್ಣನಿಗೆ ಬದುಕಲು ಅದೇ ಆಸ್ತಿ ಆಸರೆಯಾಗಿದೆ ಎಂದು ಹೇಳಿದ್ದಕ್ಕೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ‘ಆಸ್ತಿ ತೆಗೆದುಕೊಂಡು ಬಂದರೆ ಮಾತ್ರ ನನ್ನ ಮನೆಗೆ ಬಾ, ಇಲ್ಲದಿದ್ದರೆ ಇಲ್ಲೇ ಇರು’ ಎಂದು ತವರು ಮನೆಯವರು ಕೊಟ್ಟ 90 ತೊಲಾ ಬಂಗಾರದ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹೆಚ್ಚಿನ ವರದಕ್ಷಿಣೆಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ ನನ್ನ ಪತಿ ಕೃಷ್ಣ ಚೈತನ್ಯ, ಮಾವ ಅಲಪಾಟಿ ಶ್ರೀನಿವಾಸ, ಅತ್ತೆ ಗೀತಾಶ್ರೀ, ಬಾವಂದಿರಾದ ಶ್ರೀಕಾಂತ, ವಂಶಿ ಹಾಗೂ ಗಂಡನ ಸೋದರ ಮಾವನಾದ ಕೃಷ್ಣ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಮೂಲ್ಯ ಹೇಳಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ವೀರಾರೆಡ್ಡಿ ಎಚ್. ಪ್ರಕರಣ ದಾಖಲು ಮಾಡಿಕೊಂಡು ಬಳ್ಳಾರಿ ಜಿಲ್ಲೆಯ ಕೃಷ್ಣನಗರ ಕ್ಯಾಂಪ್ನ ಕೃಷ್ಣ ಚೈತನ್ಯ, ಅಲಪಾಟಿ ಶ್ರೀನಿವಾಸರಾವ್, ಶ್ರೀಕಾಂತ, ಕೃಷ್ಣ ಎನ್ನುವವರನ್ನು ಬಂಧಿಸಿದ್ದಾರೆ. ಗೀತಾಶ್ರೀ, ವಂಶಿ ಪರಾರಿಯಾಗಿದ್ದು, ಪತ್ತೆಗೆ ಬಲೆ ಬೀಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.