ರಾಯಚೂರು: ‘ರೈತ ಸ್ವಾತಂತ್ರ್ಯ ಬಿಟ್ಟು ಗುಲಾಮನಾಗುತ್ತಿದ್ದಾನೆ. ಅತೀ ಆಸೆಗೆ ಸಿಕ್ಕ ಸಿಕ್ಕ ಬೀಜ ಬಳಸಿ, ರಾಸಾಯನಿಕ ಸಿಂಪಡಿಸಿ ಭೂಮಿಯ ಫಲವತ್ತತೆ ಹಾಳು ಮಾಡುತ್ತಿದ್ದಾನೆ’ ಎಂದು ಪ್ರಗತಿ ಪರ ರೈತ ವಿಶ್ವನಾಥ ಸಜ್ಜನ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೈತರಿಂದ ರೈತರಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೂಮಿಯು ಫಲವತ್ತತೆಯ ಮೌಲ್ಯ ಕಳೆದುಕೊಳ್ಳುತ್ತಿದೆ. ಆಧುನಿಕ ತಂತ್ರಜ್ಞಾನದಿಂದ ಮೌಲ್ಯ ಕಳೆದುಕೊಂಡಿದೆ. ಅದಕ್ಕೆ ಅನಿವಾರ್ಯವಾಗಿ ರೈತರು ನೈಸರ್ಗಿಕ ಕೃಷಿಗೆ ಮರಳಲೇ ಬೇಕು. ಮಾಡುವಿಕೆಯಿಂದ ಮಾಡದಿರುವಿಕೆ ಸಾಗಬೇಕು ಎಂದರು.
ಶಹಾಪುರದ ಪ್ರಗತಿಪರ ರೈತ ಶಾಂತಿಲಾಲ ರಾಠೋಡ ಮಾತನಾಡಿ, ರೇಷ್ಮೆ ಹುಳು ಮನುಷ್ಯನಿಗೆ ಬಟ್ಟೆ ಕೊಟ್ಟು ತನ್ನ ಜೀವ ಕಳೆದುಕೊಳ್ಳುತ್ತದೆ. ಆದರೆ, ಮನುಷ್ಯ ಅನ್ನ ಕೊಟ್ಟ ಭೂಮಿಗೆ ವಿಷ ಉಣಿಸುತ್ತಿದ್ದಾನೆ. ರೇಷ್ಮೆ ಕೃಷಿ ಲಾಭದಾಯಕವಾಗಿದೆ. ರೈತರು ಕೆಲವು ಸೂಕ್ಷ್ಮತೆ ಅರಿತು ಈ ಬೇಸಾಯದಲ್ಲಿ ತೊಡಗಬೇಕು ಎಂದು ತಿಳಿಸಿದರು.
ಹುನುಗುಂದ ಪ್ರಗತಿ ಪರ ರೈತ ಡಾ.ಮಲ್ಲಣ್ಣ ನಾಗರಾಳ, ಪ್ರಗತಿಪರ ರೈತ ವೀರನಗೌಡ ಮಾತನಾಡಿದರು.
ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ವಿಸ್ತರಣ ನಿರ್ದೇಶಕ ಚಿತ್ತಾಪುರ, ಕೃಷಿ ಸಚಿವರ ತಾಂತ್ರಿಕ ಸಲಹೆಗಾರ ಡಾ.ಎ.ಬಿ.ಪಾಟೀಲ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವಿಸ್ತರಣ ನಿರ್ದೇಶಕ ಡಾ.ಶಿವಲಿಂಗೇಗೌಡ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಡಾ.ರಾಜು, ಅಮರೇಗೌಡ ಬಲ್ಲಿದವ, ಸಿದ್ದಪ್ಪ ಭಂಡಾರಿ, ವೀರನಗೌಡ ಪರಸರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.