ADVERTISEMENT

ಖರೀದಿ ಪ್ರಕ್ರಿಯೆ ವಿಳಂಬದಿಂದ ಸಂಕಷ್ಟ: ತೊಗರಿ ಖರೀದಿ ಕೇಂದ್ರಕ್ಕೆ ರೈತರ ಅಲೆದಾಟ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2025, 6:04 IST
Last Updated 26 ಫೆಬ್ರುವರಿ 2025, 6:04 IST
ಕವಿತಾಳದ ತೊಗರಿ ಖರೀದಿ ಕೇಂದ್ರ
ಕವಿತಾಳದ ತೊಗರಿ ಖರೀದಿ ಕೇಂದ್ರ   

ಕವಿತಾಳ: ಪಟ್ಟಣದಲ್ಲಿ ಖರೀದಿ ಕೇಂದ್ರ ಪ್ರಕ್ರಿಯೆ ಆರಂಭವಾಗದ ಹಿನ್ನೆಲೆಯಲ್ಲಿ ತೊಗರಿ ಬೆಳೆದ ರೈತರು ಸಂಕಷ್ಟ ಅನುಭವಿಸುವಂತಾಗಿದೆ.

ಮುಕ್ತ ಮಾರುಕಟ್ಟೆಯಲ್ಲಿ ಸತತ ದರ ಕುಸಿತದಿಂದ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ಕಾಯುತ್ತಿರುವ ರೈತರಿಗೆ ಖರೀದಿ ಆರಂಭವಾಗದಿರುವುದು ನಿರಾಸೆ ಮೂಡಿಸಿದೆ. ತೊಗರಿ ಸಂಗ್ರಹ ಮಾಡಿ ಮೂರು ತಿಂಗಳಾಗಿದ್ದು ಕೀಟ ಬಾಧೆಯಿಂದ ಅವುಗಳ ಸಂರಕ್ಷಣೆಗೆ ಪರದಾಡುತ್ತಿದ್ದಾರೆ.

ಕವಿತಾಳ ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 6,500 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ಮುಂಚಿತವಾಗಿ ಬಿತ್ತನೆ ಮಾಡಿದ್ದ ಕೆಲವು ರೈತರು ನವಂಬರ್ ತಿಂಗಳಲ್ಲಿ ಕಟಾವು ಮಾಡಿದ್ದರು. ಅಂದಿನ ಮಾರುಕಟ್ಟೆ ದರ ಪ್ರತಿ ಕ್ವಿಂಟಲ್‌ಗೆ ₹10 ಸಾವಿರ ಮೇಲ್ಪಟ್ಟು ದರಕ್ಕೆ ಮಾರಾಟ ಮಾಡಿದ್ದಾರೆ. ನಂತರ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ತೊಗರಿ ಲಗ್ಗೆ ಇಡುತ್ತಿದಂತೆ ದರ ಕುಸಿತದ ಪರಿಣಾಮ ಬಹುತೇಕ ರೈತರು ಮಾರಾಟ ಮಾಡದೆ ಸಂಗ್ರಹ ಮಾಡಿಟ್ಟುಕೊಂಡು ಬೆಂಬಲ ಬೆಲೆಯಲ್ಲಿ ಮಾರಾಟಕ್ಕಾಗಿ ಕಾಯುತ್ತಿದ್ದಾರೆ.

ADVERTISEMENT

ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತೊಗರಿ ಖರೀದಿ ಆರಂಭ ಮಾಡಿದ್ದು 100 ರೈತರು ಮಾರಾಟ ಮಾಡಲು ಅರ್ಜಿ ಸಲ್ಲಿದ್ದು 60 ರೈತರ ಅರ್ಜಿಗಳನ್ನು ಆನ್ ಲೈನ್ ನಲ್ಲಿ ಅಪ್‌ಡೇಟ್ ಮಾಡಲಾಗಿದೆ ಸರ್ವರ್ ಸಮಸ್ಯೆಯಿಂದ ವಿಳಂಬವಾಗುತ್ತಿದೆ ಎಂದು ಖರೀದಿ ಕೇಂದ್ರದ ಸಿಬ್ಬಂದಿ ತಿಳಿಸಿದರು.

ಪ್ರತಿ ಎಕರೆಗೆ 4 ಕ್ವಿಂಟಲ್ ನಂತೆ ಒಬ್ಬ ರೈತನಿಂದ 40 ಕ್ವಿಂಟಲ್ ಖರೀದಿಗೆ ಮಿತಿ ಹಾಕಲಾಗಿದೆ. ಸದ್ಯ ಮುಕ್ತ ಮಾರುಟಕಟೆಯಲ್ಲಿ ₹7,300 ಇದ್ದರೆ ಖರೀದಿ ಕೇಂದ್ರದಲ್ಲಿ ₹8,000 ನಿಗದಿ ಮಾಡಲಾಗಿದೆ. ಖರೀದಿ ಆರಂಭವಾಗದ ಕಾರಣ ನಿತ್ಯ ಕೇಂದ್ರಕ್ಕೆ ಅಲೆಯುತ್ತಿರುವ ರೈತರು ಸಿಬ್ಬಂದಿಯೊದಿಗೆ ವಾಗ್ವಾದ ಮಾಡುತ್ತಿದ್ದಾರೆ.

‘ಲಕ್ಷಾಂತರ ಹಣ ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ ಮಾರುಕಟ್ಟೆಯಲ್ಲಿ ದರ ಕುಸಿತವಾಗಿದೆ ಖರೀದಿ ಕೇಂದ್ರದಲ್ಲಿ ನೋಂದಣಿಗೆ ಅಲೆಯುವಂತಾಗಿದೆ ಅಗತ್ಯ ದಾಖಲೆ ನೀಡಿದ ನೋಂದಣಿ ಮಾಡಿ ತಿಂಗಳು ಕಳೆದರೂ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ, ಕಟಾವು ಮಾಡಿ ಮೂರು ತಿಂಗಳು ಕಳೆದಿದೆ ಹುಳುಗಳ ಕಾಟ ಹೆಚ್ಚುತ್ತಿದೆ, ರಸಗೊಬ್ಬರ, ಕ್ರಿಮಿನಾಶ, ಟ್ರ್ಯಾಕ್ಟರ್‌ ಬಾಡಿಗೆ ಮತ್ತು ಕಾರ್ಮಿಕರಿಗೆ ಕೂಲಿ ನೀಡುವುದು ಸೇರಿದಂತೆ ಸಾಲ ತೀರಿಸಲು ಸಾಧ್ಯವಾಗದೆ ಸಂಕಷ್ಟ ಎದುರಿಸುತ್ತಿದ್ದೇವೆ’ ಎಂದು ರೈತರಾದ ವಿರೇಶ, ಮೌನೇಶ ಹಿರೇಕುರಬರ, ಬೂದೆಪ್ಪ ಯಾದವ ಹೇಳಿದರು.

‘ಸರ್ವರ್ ಸಮಸ್ಯೆಯಿಂದ ಆನ್ ಲೈನ್ ಸೇರ್ಪಡೆ ವಿಳಂಬವಾಗುತ್ತಿದೆ ತೂಕದ ಯಂತ್ರ ಮತ್ತು ಚೀಲಗಳ ವಿತರಣೆಯಾಗದ ಕಾರಣ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ ಮುಂದಿನ ವಾರದಲ್ಲಿ ಖರೀದಿ ಆರಂಭವಾಗುತ್ತದೆ’ ಎಂದು ಖರೀದಿ ಕೇಂದ್ರದ ಸುರೇಶ ತಿಳಿಸಿದರು.

ಈಗ ಮಾರಾಟ ಮಾಡಿದರೂ ಹಣ ಪಾವತಿಗೆ ಎರಡು ಮೂರು ತಿಂಗಳು ಕಾಯಬೇಕು ಈಗಾಗಲೇ ವಿಳಂಬವಾಗಿದ್ದು ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ
ಮುಕ್ತಾರ್‌ ಪಾಶಾ ಗುಡಿಗಿ ರೈತ
ಈಗಾಗಲೇ ಬೇರೆಡೆ ಖರೀದಿ ಕೇಂದ್ರಗಳು ಆರಂಭವಾಗಿವೆ ಈ ಬಗ್ಗೆ ಸಿಬ್ಬಂದಿಯೊಂದಿಗೆ ಚರ್ಚಿಸಿ ಮುಂದಿನ ವಾರ ಖರೀದಿ ಆರಂಭಿಸಲಾಗುವುದು
ಸುನೀಲ್ ಮಾರ್ಕೇಟಿಂಗ್ ಫೆಡರೇಷನ್ ಶಾಖಾ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.