ಮಾನ್ವಿ: ತಾಲ್ಲೂಕಿನ ತುಂಗಭದ್ರಾ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ, ನೆರೆಹಾವಳಿ ಭೀತಿ ಎದುರಾಗಿದೆ. ಕಳೆದ ಮೂರು ದಿನಗಳಿಂದ ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ಪ್ರಮಾಣದ ನೀರು ಹರಿಬಿಡುತ್ತಿರುವ ಕಾರಣ ನದಿ ದಂಡೆಯ ಗ್ರಾಮಗಳ ಜನರು ಆತಂಕಗೊಂಡಿದ್ದಾರೆ.
ಚೀಕಲಪರ್ವಿ ಗ್ರಾಮದ ಐತಿಹಾಸಿಕ ವಿಜಯದಾಸರ ಕಟ್ಟೆಯವರೆಗೆ ನದಿ ನೀರು ಹರಿದು ಬಂದಿದೆ. ನದಿದಂಡೆಯ ಪ್ರದೇಶದಲ್ಲಿರುವ ರೈತರ ಜಮೀನುಗಳು ಜಲಾವೃತಗೊಂಡಿವೆ. ಶುಕ್ರವಾರ ತುಂಗಭದ್ರಾ ಜಲಾಶಯದಿಂದ 1.52 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿಬಿಡಲಾಗಿದ್ದು ಶನಿವಾರ ನದಿದಂಡೆಯ ಗ್ರಾಮಗಳಿಗೆ ನೀರು ನುಗ್ಗುವ ಸಂಭವ ಇದೆ.
ತಾಲ್ಲೂಕಿನ ದೇವಿಪುರ, ಖರಾಬದಿನ್ನಿ ಯಡಿವಾಳ, ಜಾಗೀರಪನ್ನೂರು, ಚೀಕಲಪರ್ವಿ, ದದ್ದಲ, ಉಮಳಿ ಪನ್ನೂರು ಮತ್ತಿತರ ಗ್ರಾಮಗಳು ನದಿಪಾತ್ರದ ಗ್ರಾಮಗಳಾಗಿವೆ. ಪ್ರವಾಹ ಪರಿಸ್ಥಿತಿ ಎದುರಿಸಲು ತಾಲ್ಲೂಕು ಆಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ನದಿಯಲ್ಲಿ ಹೆಚ್ಚುತ್ತಿರುವ ನೀರಿನ ಪ್ರಮಾಣದ ಕುರಿತು ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ನದಿ ದಂಡೆಯ ಸ್ಥಳಗಳಿಗೆ ತೆರಳದಂತೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲಾಗಿದೆ. ಜಾನುವಾರಗಳ ರಕ್ಷಣೆಗೂ ಸೂಚಿಸಲಾಗಿದೆ ಎಂದು ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ತಿಳಿಸಿದ್ದಾರೆ.
ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಪ್ರವಾಹ ಪರಿಸ್ಥಿತಿ ಕುರಿತು ನಿಗಾವಹಿಸಿದ್ದಾರೆ. ಶುಕ್ರವಾರ ಪೊಲೀಸ್ ಇನ್ಸ್ಪೆಕ್ಟರ್ ಮಹಾದೇವಪ್ಪ ಪಂಚಮುಖಿ ಚೀಕಲಪರ್ವಿ ಗ್ರಾಮಕ್ಕೆ ಭೇಟಿ ನೀಡಿದ್ದರು.
ಸ್ಥಳಾಂತರಕ್ಕೆ ವಿಫಲ: 2009ರ ನೆರೆಹಾವಳಿ ನಂತರ ‘ಆಸರೆ’ ಮನೆಗಳನ್ನು ನಿರ್ಮಿಸಿ ಕೆಲವು ಗ್ರಾಮಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿತ್ತು. ಆದರೆ ದೇವಿಪುರ ಹಾಗೂ ಚೀಕಲಪರ್ವಿ ಗ್ರಾಮಗಳು 12 ವರ್ಷಗಳು ಕಳೆದರೂ ‘ಆಸರೆ’ ಕಾಲೊನಿಗಳಿಗೆ ಸ್ಥಳಾಂತರಗೊAಡಿಲ್ಲ. ಚೀಕಲಪರ್ವಿ ಗ್ರಾಮದಲ್ಲಿ ‘ಆಸರೆ’ ಮನೆಗಳ ಹಂಚಿಕೆಯಲ್ಲಿನ ಗೊಂದಲ ಹಾಗೂ ದೇವಿಪುರ ಗ್ರಾಮದ ‘ಆಸರೆ’ ಕಾಲೊನಿಗೆ ಸಂಪರ್ಕ ರಸ್ತೆಯ ಸಮಸ್ಯೆ, ಮೂಲಸೌಕರ್ಯಗಳ ಕೊರತೆಯಿಂದ ಗ್ರಾಮಗಳ ಸಂಪೂರ್ಣ ಸ್ಥಳಾಂತರ ಇದುವರೆಗೂ ಸಾಧ್ಯವಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.