ರಾಯಚೂರು: ತಾತನ ಹೆಸರಿನಲ್ಲಿದ್ದ ನಿವೇಶನವನ್ನು ಮೋಸದಿಂದ ತನ್ನ ಹೆಸರಿಗೆ ನೋಂದಾಯಿಸಿಕೊಂಡು ಮಾರಾಟ ಮಾಡಿ ಹಣ ನೀಡದೇ ಸತಾಯಿಸುತ್ತಿದ್ದ ಮೊಮ್ಮಗನಿಂದ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ₹10 ಲಕ್ಷ ಪರಿಹಾರ ಕೊಡಿಸಿದೆ.
92 ವರ್ಷದ ರಾಯಚೂರಿನ ನಿವಾಸಿಯಾದ ವಿಠ್ಠಲ ಅವರು ಹೈದರಾಬಾದ್ನಲ್ಲಿ ನೆಲೆಸಿದ್ದರು. ಅವರ ಮೊಮ್ಮಗ ಅಶೋಕ ಮೋಸದಿಂದ ನಿವೇಶನ ತನ್ನ ಹೆಸರಿಗೆ ನೋಂದಾಯಿಸಿಕೊಂಡು ಮಾರಾಟ ಮಾಡಿದ್ದ. ನಿವೇಶನ ಮಾರಾಟ ಮಾಡಿದ ಹಣ ನಿಡುವಂತೆ ವಿಠ್ಠಲ ಅವರು ಐದು ವರ್ಷಗಳಿಂದ ಅಶೋಕನಿಗೆ ಕೇಳಿದರೂ ನೀಡಿರಲಿಲ್ಲ.
ನಂತರ ನಿವೇಶನ ಮಾರಾಟ ಮಾಡಿದ ಹಣ ಕೊಡಿಸುವಂತೆ ವಿಠ್ಠಲ ರಾಯಚೂರಿನ ಹಿರಿಯ ನಾಗರಿಕರ ನ್ಯಾಯ ಮಂಡಳಿಯಲ್ಲಿ ಅರ್ಜಿ ಸಲ್ಲಿಸಿದ್ದರು.
ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಶನಿವಾರ ಅಶೋಕ ಹಾಗೂ ವಿಠ್ಠಲ ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ದೂರು ಆಲಿಸಿದರು. ಇದರ ಪರಿಣಾಮ ಅಶೋಕ ಹಣ ಕೊಡಲು ಒಪ್ಪಿದ್ದಾನೆ. ಉಪ ವಿಭಾಗಾಧಿಕಾರಿ ಮೆಹಬೂಬಿ ಅವರು ತಮ್ಮ ಕಚೇರಿಯಲ್ಲಿ ₹10 ಲಕ್ಷದ ಚೆಕ್ ಕೊಡಿಸಿದ್ದಾರೆ.
ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಅಧಿಕಾರಿ ಪವನ್ ಕಿಶೋರ ಪಾಟೀಲ ಹಾಗೂ ಸಿದ್ದಣ್ಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.