ADVERTISEMENT

ಗಬ್ಬೂರು ಜಾತ್ರೆ: 150 ಸಾಮೂಹಿಕ ವಿವಾಹ ಇಂದು

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 8:10 IST
Last Updated 26 ಜನವರಿ 2026, 8:10 IST
ಗಬ್ಬೂರು ಬೂದಿಬಸವೇಶ್ವರ ಮಠದ ಹೊರನೋಟ
ಗಬ್ಬೂರು ಬೂದಿಬಸವೇಶ್ವರ ಮಠದ ಹೊರನೋಟ   

ದೇವದುರ್ಗ: ತಾಲ್ಲೂಕಿನ ಗಬ್ಬೂರು ಗ್ರಾಮದ ಪುರಾತನ ಬೂದಿ ಬಸವೇಶ್ವರ ಮಹಾಸಂಸ್ಥಾನ ಮಠ ಭಕ್ತರ ಆರಾಧನಾ ಕೇಂದ್ರವಾಗಿದೆ.

ಗಬ್ಬೂರು ಸೇರಿ ಸುತ್ತಮುತ್ತಲಿನ ಅನೇಕ ಗ್ರಾಮಗಳ ಜನ ಒಟ್ಟಾಗಿ ಜಾತ್ರೆ ಆಚರಿಸುತ್ತಾರೆ. ಪ್ರತಿವರ್ಷ ಮಾಘ ಮಾಸದಲ್ಲಿ ಮಠದ ವ್ಯಾಪ್ತಿಯ ಗ್ರಾಮಗಳಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಜಾತ್ರೆ ಆರಂಭವಾಗುವ ಒಂದು ತಿಂಗಳು ಮೊದಲೇ ಜನರು ಸ್ವಯಂ ಪ್ರೇರಿತರಾಗಿ ಮಠಕ್ಕೆ ಬಂದು ವಿವಿಧ ಸೇವೆಗಳನ್ನು ಸಲ್ಲಿಸುವುದು ರೂಢಿ.

ವಿಶ್ವಕರ್ಮ ಸಮುದಾಯದವರು ರಥ ಸಿದ್ಧಪಡಿಸುತ್ತಾರೆ. ಅದರ ದುರಸ್ತಿ ಕೈಗೊಳ್ಳುತ್ತಾರೆ. ಅಡುಗೆ ಮಾಡುವವರು, ಆಹಾರ ಧಾನ್ಯ ಸಂಗ್ರಹಿಸುವುದು, ಸ್ವಚ್ಛಗೊಳಿಸುವುದು, ನೀರಿನ ವ್ಯವಸ್ಥೆ ಮಾಡುವುದು, ಹೀಗೆ ಪ್ರತಿಯೊಂದು ಕೆಲಸವನ್ನೂ ಭಕ್ತರೇ ಖುದ್ದಾಗಿ ಮಾಡುತ್ತಾರೆ.

ADVERTISEMENT

ಗಬ್ಬೂರಿನ ಬೂದಿಬಸವೇಶ್ವರ ಮಹಾಸಂಸ್ಥಾನ ಮಠದಲ್ಲಿ ಸದ್ಯ 8ನೇ ಪೀಠಾಧಿಪತಿಯಾಗಿ ಬೂದಿ ಬಸವೇಶ್ವರ ಶಿವಾಚಾರ್ಯರು ಇದ್ದಾರೆ. 1999ರಲ್ಲಿ ಪೀಠ ವಹಿಸಿಕೊಂಡಿದ್ದಾರೆ. 600 ವರ್ಷಗಳ ಇತಿಹಾಸ ಇರುವ ಈ ಮಠದಲ್ಲಿ ಪ್ರತಿವರ್ಷ ಮಾಘ ಶುದ್ಧ ದ್ವಾದಶಿಯಂದು ರಥೋತ್ಸವ ಹಾಗೂ ಮಾಘ ಶುದ್ಧ ನವಮಿಯಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯುತ್ತದೆ. ಪ್ರತಿ ವರ್ಷದಂತೆ ಇಂದು (ಸೋಮವಾರ) ಮಧ್ಯಾಹ್ನ 2 ಗಂಟೆ ಸುಮಾರಿಗೆ 151 ಜೋಡಿ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

40 ಸೇವಾ ಮನೆತನಗಳು: ಗಬ್ಬೂರಿನಲ್ಲಿ ಮಠಕ್ಕೆ 40 ಬಗೆಯ ಸೇವೆಗಳನ್ನು ಸಲ್ಲಿಸುವ 40 ಮನೆತನಗಳಿವೆ. ಈಗಲೂ ಸಂಪ್ರದಾಯ ಮುಂದುವರಿದಿದೆ. ರಥೋತ್ಸವದ ಸಂದರ್ಭದಲ್ಲಿ ಗಂಟೆ ಹೊಡೆಯುವವರು, ಪಲ್ಲಕ್ಕಿ ಸೇವೆ, ಹಿಲಾಲ್‌ ಹಿಡಿಯುವವರು, ರಥದ ಚಕ್ರ ಸಿದ್ಧಪಡಿಸುವವರು, ಮಠದ ಸ್ವಚ್ಛತೆ ಹೀಗೆ ಎಲ್ಲರೂ ಸ್ವಯಂಪ್ರೇರಿತರಾಗಿ ಬಂದು ಸೇವೆ ಮಾಡುತ್ತಾರೆ.

ಜನವರಿ 26ರಿಂದ ಫೆ.2ರವರೆಗೆ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮನೊರಂಜನೆ, ನಾಟಕ ಸೇರಿದಂತೆ ವಿವಿಧ ಧಾರ್ಮಿಕ ಗೋಷ್ಠಿಗಳು ನಡೆಯಲಿವೆ. ಜಿಲ್ಲೆಯ ವಿವಿಧ ಮಠಗಳ ಮಠಾಧೀಶರು, ಸಚಿವರು, ಹಾಲಿ ಮತ್ತು ಮಾಜಿ ಶಾಸಕರು, ಸಂಸದರು ಸೇರಿದಂತೆ ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ.

ಗಬ್ಬೂರು ಬೂದಿಬಸವೇಶ್ವರ ಮಠದ ಆವರಣದಲ್ಲಿ ರಥೋತ್ಸವ ಅಂಗವಾಗಿ ರಥ ಸಿದ್ಧಪಡಿಸುತಿರುವುದು
ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಅನ್ನ ದಾಸೋಹ ಕುಡಿಯುವ ನೀರು ಸೇರಿದಂತೆ ಬಹುತೇಕ ಸೌಲಭ್ಯ ಕಲ್ಪಿಸಲಾಗಿದೆ. ಪೊಲೀಸ್‌ ಇಲಾಖೆ ಅಧಿಕಾರಿಗಳು ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಿದ್ದಾರೆ
ಚನ್ನಬಸಯ್ಯ ಸ್ವಾಮಿ ಶ್ರೀಮಠದ ಸಹಾಯಕ
ಭಕ್ತರು ಸ್ವಯಂ ಸೇವಕರಾಗಿ ಸೇವೆ ಮಾಡುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಗ್ರಾಮ ಪಂಚಾಯಿತಿಯಿಂದ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ
ತಿರುಮಲ ರಡ್ಡಿ ಗಬ್ಬೂರು ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.