ರಾಯಚೂರು: ‘ಸಮಾಜದಲ್ಲಿ ಯಾರು ಅನಾಥರಲ್ಲ. ಅನಾಥ ಪ್ರಜ್ಞೆಯಲ್ಲಿರದೆ ಉತ್ತಮವಾಗಿ ವಿದ್ಯಾಭಾಸ ಮಾಡಿ ದೊಡ್ಡ ಹುದ್ದೆ ಪಡೆಯಬೇಕು‘ ಎಂದು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಹೇಳಿದರು.
ನಗರದ ಹೊರವಲಯದ ಕನಕದಾಸ ಅನಾಥ ಮಕ್ಕಳ ವಸತಿ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಕ್ಕಳು ಅನಾಥ ಪ್ರಜ್ಞೆ ಬಿಟ್ಟು, ಉನ್ನತ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಅನಾಥರೆಂದು ತಮ್ಮನ್ನು ಸಂಕುಚಿತ ಮನೋಭಾವಕ್ಕೆ ದೂಡದೇ ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬಂದು ಇತರರಿಗೆ ಸಹಾಯ ಮಾಡಬೇಕು‘ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಅನಾಥ ಆಶ್ರಮದ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಸನ್ಮಾನ ಹಾಗೂ ಗ್ರೀನ್ ರಾಯಚೂರು ಸಂಸ್ಥೆಯಿಂದ ತಯಾರಿಸಲಾದ ಪರಿಸರ ಸ್ನೇಹಿ ಬಟ್ಟೆಯ ಕೈ ಚೀಲಗಳನ್ನು ವಿತರಿಸಲಾಯಿತು.
ಜಿಲ್ಲಾ ಪ್ರದಾನ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ, ಸದಸ್ಯ ಕಾರ್ಯದರ್ಶಿ ರಮೇಶ್ ಮಹಾಜನ್ ಅಪ್ಪಾಸಾಬ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಬಸವರಾಜ, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸೇವೆಗಳ ಸದಸ್ಯೆ ಸರಸ್ವತಿ ಕಿಲಕಿಲೆ, ಕನಕದಾಸ ಅನಾಥ ಮಕ್ಕಳ ವಸತಿ ಶಾಲೆಯ ಅಧ್ಯಕ್ಷ ಮಂದಕಲ್ ಬಾಬು ಮತ್ತು ಸಂಸ್ಥೆಯ ಅಧೀಕ್ಷಕಿ ಶಕುಂತಲಾ, ಗ್ರೀನ್ ರಾಯಚೂರು ಸಂಸ್ಥೆಯ ಕಾರ್ಯದರ್ಶಿ ರಾಜೇಂದ್ರಕುಮಾರ ಶಿವಾಳೆ ಇದ್ದರು.
ಪಬ್ಲಿಕ್ ಶಾಲೆಯಲ್ಲಿ ಗಾಂಧಿ ಜಯಂತಿ: ರಾಯಚೂರು ನಗರದ ಹೊರವಲಯದ ಯರಮರಸ್ ಕ್ಯಾಂಪ್ ಬಳಿಯ ಫೆಡರಲ್ ಶಿಕ್ಷಣ ಸಂಸ್ಥೆಯ ಫೆಡರಲ್ ಪಬ್ಲಿಕ್ ಶಾಲೆಯಲ್ಲಿ ಮಹಾತ್ಮಾಗಾಂಧಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿ ಜಯಂತಿ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಹೈಫೆರೋಜ್ ಇಬ್ಬರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕಾಲೇಜಿನ ಪ್ರಾಚಾರ್ಯ ಸತ್ಯನಾರಾಯಣ, ಪಿಯು ಕಾಲೇಜಿನ ಪ್ರಾಚಾರ್ಯ ಮಹಮ್ಮದ್ ಇಸಾಕ್, ಶಾಲೆಯ ಮುಖ್ಯಗುರು ಸಮೀನಾ ಜುಲ್ಫೀನ್, ಶಾಲೆಯ ಶಿಕ್ಷಕರು, ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.