ಲಿಂಗಸುಗೂರು: ಜಿಲ್ಲಾ ಕೇಂದ್ರಕ್ಕೆ ಮಂಜೂರಾಗಿರುವ ನೂತನ ರಾಯಚೂರು ವಿಶ್ವ ವಿದ್ಯಾಲಯಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು’ ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಬುಧವಾರ ಉಪ ವಿಭಾಗಾಧಿಕಾರಿ ಶಿಂಧೆ ಅವಿನಾಶ ಸಂಜೀವನ್ ಅವರಿಗೆ ಮನವಿ ಸಲ್ಲಿಸಿ, ರಾಯಚೂರು ಸ್ನಾತಕೋತ್ತರ ಕೇಂದ್ರ ಮೇಲ್ದರ್ಜೇರಿಸಿ ವಿಶ್ವವಿದ್ಯಾಲಯ ಎಂದು ಘೋಷಿಸಿದ್ದು ಇಂದಿಗೂ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಅಡಿಟೋರಿಯಮ್, ಈ ಭಾಗದ ಮಕ್ಕಳ ಭವಿಷ್ಯ ರೂಪಿಸುವ ವೈವಿಧ್ಯಮಯ ಕೋರ್ಸ್ಗಳ ಆರಂಭ, ಅನುಭವಿ ಉಪನ್ಯಾಸಕರ ನೇಮಕಾತಿ ಮಾಡದೆ ಹೋಗಿದ್ದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದು ಗಮನ ಸೆಳೆದರು.
ಬೆರಳೆಣಿಕೆಯಷ್ಟು ಕೋರ್ಸ್ಗಳು ಮಾತ್ರ ಮಂಜೂರು ಮಾಡಿದ್ದು, ಅಗತ್ಯ ಪ್ರಯೋಗಾಲಯ, ಉಪನ್ಯಾಸಕರ ಕೊರತೆಯಿಂದ ಪ್ರಥಮ ದರ್ಜೆ ಕಾಲೇಜುಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ತರಗತಿ ನಡೆಸುತ್ತಿರುವುದು ನೋವಿನ ಸಂಗತಿ. ಹಾಗಾಗಿ ರಾಜ್ಯ ಸರ್ಕಾರ ಬಜೆಟ್ನಲ್ಲಿ ವಿಶ್ವವಿದ್ಯಾಲಯಕ್ಕೆ ಹೆಚ್ಚುವರಿ ಬಜೆಟ್ ನೀಡುವ ಜತೆಗೆ ಅಗತ್ಯ ಸೌಲಭ್ಯ, ಹೆಚ್ಚುವರಿ ಕೋರ್ಸ್ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಪಡಿಸಿದರು.
ತಾಲ್ಲೂಕು ಘಟಕ ಅಧ್ಯಕ್ಷ ಸೈಯದ್ ಅಬ್ದುಲ್ ವದೂದ್. ಪದಾಧಿಕಾರಿಗಳಾದ ಮೊಹ್ಮದಪೀರ್ ಲೇಟಗೇರಿ, ಅಲ್ಲಾಭಕ್ಷು ಅಮೀರ್, ಶೌಕತ್, ನಯೀಮ್, ಆಶ್ಫಾಕ್, ಆಫ್ರಿದಿ ಸೊಹೈಲ್ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.