
ಮಸ್ಕಿ: ರೈತರು ತಮ್ಮ ಜಮೀನಿಗೆ ತಕ್ಕಂತೆ ಬೆಳೆ ಬೆಳೆಯಬೇಕು ಎಂದು ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ರೈತರಿಗೆ ಸಲಹೆ ನೀಡಿದರು.
ಇಲ್ಲಿನ ಜಲಾಶಯಕ್ಕೆ ಶುಕ್ರವಾರ ‘ಬಾಗಿನ’ ಸಲ್ಲಿಸಿದ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರಿಂದ ಜಲಾಶಯ ಭರ್ತಿಯಾಗಿ ರೈತರು ಸಂತಸದಿಂದ ಇದ್ದಾರೆ. ಜಲಾಶಯದ ನೀರಿನ ಪ್ರಮಾಣದ ಜೊತೆಗೆ ತಮ್ಮ ಜಮೀನಿಗೆ ತಕ್ಕಂತೆ ಕೃಷಿ ಚಟುವಟಿಕೆ ಮಾಡಿದರೆ ಉತ್ತಮ ಬೆಳೆ ಬೆಳೆಯಲು ಸಾಧ್ಯ ಎಂದರು.
ಜಲಾಶಯದ ನೀರನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದ ಅವರು, ಜಲಾಶಯದ ಕಾಲುವೆಗಳನ್ನು ಆಧುನೀಕರಣಗೊಳಿಸಿ ಎಲ್ಲ ರೈತರಿಗೆ ನೀರು ಸಿಗುವಂತೆ ಮಾಡಲಾಗಿದೆ ಎಂದರು.
ತಹಶೀಲ್ದಾರ್ ಮಲ್ಲಪ್ಪ ಯರಗೋಳ, ತಾಲ್ಲೂಕು ಪಂಚಾಯಿತಿ ಇಒ ಅಮರೇಶ ಯಾದವ್, ಯೋಜನೆಯ ಎಇಇ ಗುರುಮೂರ್ತಿ, ಎಂಜನಿಯರ್ ದಾವುದ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮೈಬುಸಾಬ ಮುದ್ದಾಪೂರ ಸೇರಿ ಇತರರು ಹಾಜರಿದ್ದರು.
ಅಧಿಕಾರಿಗಳು ಹಾಗೂ ನೂರಾರು ರೈತರೊಂದಿಗೆ ಮಸ್ಕಿ ಜಲಾಶಯಕ್ಕೆ ಆಗಮಿಸಿದ ಶಾಸಕ ಆರ್. ಬಸನಗೌಡ ತುರ್ವಿಹಾಳ ಗಂಗಾ ಪೂಜೆ ನೆರವೇರಿಸಿದರು. ನಂತರ ನೂರಾರು ರೈತರ ಜಯಘೋಷಗಳ ನಡುವೆ ಜಲಾಶಯಕ್ಕೆ ಬಾಗಿನ ಸಲ್ಲಿಸಿದರು.
ಮಸ್ಕಿ ಜಲಾಶಯ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರ ಕೃಷಿಗೆ ನೀರು ತಲುಪಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆಆರ್.ಬಸನಗೌಡ ತುರ್ವಿಹಾಳ ಶಾಸಕ
ಮಸ್ಕಿ ಜಲಾಶಯಕ್ಕೆ ಬಾಗಿನ ಸಲ್ಲಿಸಿದ ನಂತರ ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರು ಜಲಾಶಯದ ಎಡ ಮತ್ತು ಬಲದಂಡೆಯ ಕಾಲುವೆಗಳ ಗೇಟ್ಗಳನ್ನು ಎತ್ತುವ ಮೂಲಕ ಶುಕ್ರವಾರ ದಿಂದಲೇ ರೈತರ ಕೃಷಿ ಚಟುವಟಿಕೆಗೆ ನೀರು ಹರಿಸಿದರು. ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಕೃಷಿಗೆ ನೀರು ಬಿಡುವಂತೆ ರೈತರು ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿ ಅಚ್ಚುಕಟ್ಟು ಪ್ರದೇಶದ ಕೃಷಿಗೆ ನೀರು ಬಿಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.