
ಹಂಪನಗೌಡ ಬಾದರ್ಲಿ
ಸಿಂಧನೂರು: ನಗರದ ಗಂಗಾವತಿ ರಸ್ತೆ ಮಾರ್ಗದ ಮುಖ್ಯರಸ್ತೆಯಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ರಸ್ತೆ ಜಾಗ ಕಬಳಿಸಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ’ ಎಂದು ಶಾಸಕ ಹಂಪನಗೌಡ ಬಾದರ್ಲಿ ಸ್ಪಷ್ಟಪಡಿಸಿದರು.
ಮಂಗಳವಾರ ಹೇಳಿಕೆ ನೀಡಿರುವ ಅವರು, ‘ಮೂರು ವರ್ಷಗಳ ಹಿಂದೆಯೇ ರಸ್ತೆ ಅಭಿವೃದ್ಧಿ ಕುರಿತು ಕ್ರಿಯಾಯೋಜನೆ ತಯಾರಿಸಲಾಗಿದೆ. ಅದರಂಗವಾಗಿ ರಸ್ತೆ ಮತ್ತು ಚರಂಡಿ ಕಾಮಗಾರಿ ನಡೆಯುತ್ತಿದೆ. ಸಿಸಿ ರಸ್ತೆಯ ಪಕ್ಕದಲ್ಲಿಯೇ ಚರಂಡಿ ನಿರ್ಮಾಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೊನೆಯಲ್ಲಿ ಚರಂಡಿ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆಗಿಂತ ಪೂರ್ವದಲ್ಲಿ ತಯಾರಿಸಿದ ಅಂದಾಜು ಪತ್ರಿಕೆಯಲ್ಲಿ ಕೇವಲ ರಸ್ತೆ ನಿರ್ಮಾಣ ಮಾಡುವುದಾಗಿತ್ತು. ಟೆಂಡರ್ ಸಹ ಅಂತಿಮಗೊಂಡಿರಲಿಲ್ಲ. ತಾವು ಶಾಸಕರಾದ ನಂತರ ರಸ್ತೆ ಎರಡು ಪಕ್ಕದಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ತಮ್ಮ ಅನುದಾನದಲ್ಲಿ ಹಣ ಬಿಡುಗಡೆಗೊಳಿಸಿ, ವ್ಯವಸ್ಥಿತವಾಗಿ ರಸ್ತೆ ನಿರ್ಮಿಸುವ ಕಾರ್ಯ ನಡೆದಿದೆ. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪನವರ ಸಲಹೆಯಂತೆ ರಾಜಕೀಯ ದುರುದ್ದೇಶ ಇಟ್ಟುಕೊಳ್ಳದೆ, ಮುಂಬರುವ ಪೀಳಿಗೆ ನೆನಪಿಡುವಂತೆ ರಸ್ತೆ ಕಾಮಗಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.