ADVERTISEMENT

ಬಜೆಟ್‌ನಲ್ಲಿ ಸಂಪೂರ್ಣ ಸಾಲಮನ್ನಾ ಘೋಷಣೆ: ಎಚ್‌.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 10:39 IST
Last Updated 5 ಜನವರಿ 2019, 10:39 IST
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿದರು. –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿದರು. –ಪ್ರಜಾವಾಣಿ ಚಿತ್ರ   

ರಾಯಚೂರು: 2019-20 ನೇ ಸಾಲಿನ ಬಜೆಟ್ ಫೆಬ್ರುವರಿಯಲ್ಲಿ ಮಂಡಿಸಲಾಗುವುದು. ಅದರಲ್ಲಿ ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಜಿಲ್ಲೆಯ ಸಿಂಧನೂರಿನಲ್ಲಿ ಶನಿವಾರ ಆರಂಭವಾದ ಮೂರು ದಿನಗಳ ರಾಜ್ಯಮಟ್ಟದ ಮತ್ಸ್ಯ ಹಾಗೂ ಜಾನುವಾರು ಮೇಳ ಉದ್ಘಾಟಿಸಿ ಮಾತನಾಡಿದರು.

ರೈತರ ಸಾಲಮನ್ನಾ ಮಾಡಲುಇಲಾಖೆಗಳಿಗೆಕೊಡುವ ಅನುದಾನದಲ್ಲಿ ವ್ಯತ್ಯಾಸ ಮಾಡಿಲ್ಲ. ಸಾಲಮನ್ನಾ ಉದ್ದೇಶಕ್ಕಾಗಿ ಪ್ರತ್ಯೇಕ ಹಣ ತೆಗೆದಿರಿಸಲಾಗಿದೆ ಎಂದರು.

ADVERTISEMENT

ರಾಜ್ಯದ ರೈತರು, ಕೂಲಿ ಕಾರ್ಮಿಕರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದೇನೆ.‌ ಭೂಮಿಯಿಲ್ಲದ ಕುಟುಂಬಕ್ಕೆ ಉದ್ಯೋಗ ಒದಗಿಸಬೇಕು ಎನ್ನುವ ಚಿಂತನೆ ಆರಂಭವಾಗಿದೆ. ಸ್ವಲ್ಪ ಸಮಯಾವಕಾಶ ಕೊಡಿ. ಇಡೀ ಆರುವರೆ ಕೋಟಿ ಜನರ ಸಮಸ್ಯೆಗಳನ್ನು ಪರಿಹರಿಸುತ್ತೇವೆ.

ಮೈತ್ರಿ ಸರ್ಕಾರದ ಮೇಲೆ ವಿಶ್ವಾಸ ಇಡಬೇಕು. ರಾಯಚೂರು ಜಿಲ್ಲೆಯ ಜನರು ಅಧಿಕಾರಯಿಲ್ಲದ ಸಂದರ್ಭದಲ್ಲಿ ಗೌರವ ಕೊಟ್ಟಿದ್ದಾರೆ ಎಂದು ಹೇಳಿದರು.

ಇಂಧನ ದರ ಹೆಚ್ಚಳ‌ ಅನಿವಾರ್ಯ:‘ರಾಜ್ಯದಲ್ಲಿ ಇಂಧನ ದರ ಹೆಚ್ಚಳ‌ ಅನಿವಾರ್ಯ. ದರ ಹೆಚ್ಚಳವಾಗಿದ್ದ ವೇಳೆ ಸೆಸ್ ಕಡಿಮೆ ಮಾಡಲಾಗಿತ್ತು. ಬಸ್ ದರ ಹೆಚ್ಚಿಸಬೇಕೆನ್ನುವ ಪ್ರಸ್ತಾವ ಇದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಕರ್ನಾಟಕದಲ್ಲಿ ಇಂಧನ ತೆರಿಗೆ ಕಡಿಮೆ ಇದೆ’ ಎಂದರು.

‘ಕೊಪ್ಪಳದಲ್ಲಿ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಗೊತ್ತಾಯಿತು. ಆತ್ಮಹತ್ಯೆಗೆ ಏನು ಕಾರಣ ಎಂಬುದನ್ನು ಅಧಿಕಾರಿಗಳ ಮೂಲಕ ಕೂಡಲೇ ಮಾಹಿತಿ ಪಡೆದಿದ್ದೇನೆ. ಕೌಟುಂಬಿಕವಾಗಿ ಭೂಮಿ ಹಂಚಿಕೆ ವಿಷಯವಾಗಿ ಕಲಹ ಏರ್ಪಟ್ಟಿರುವುದು ಅವರ ಆತ್ಮಹತ್ಯೆಗೆ ಕಾರಣ. ಆದರೆ, ಅವರ ಆತ್ಮಹತ್ಯೆಗೆ ಸಾಲಬಾಧೆ ಕಾರಣ ಎಂದು ಮಾಧ್ಯಮದವರು ಕೊಡುತ್ತಿದ್ದಾರೆ. ದಯಮಾಡಿ ವಸ್ತುನಿಷ್ಠ ಸುದ್ದಿಗಳನ್ನು ಪ್ರಸಾರ ಮಾಡಬೇಕು’ ಎಂದು ಹೇಳಿದರು.

ಸಿಂಧನೂರಿನಲ್ಲಿ ನಡೆದ ಮೇಳದಲ್ಲಿ ಪ್ರಗತಿಪರ ರೈತರನ್ನು ಮುಖ್ಯಮಂತ್ರಿ ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.