ರಾಯಚೂರು: ಜಿಲ್ಲೆಯಾದ್ಯಂತ ಮಂಗಳವಾರ ಬೆಳಿಗ್ಗೆ ಒಂದು ತಾಸು ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ವಾಹನ ಸಂಚರಿಸುವ ರಸ್ತೆಗಳು ಕಾಲುವೆಯಂತಾಗಿವೆ.
ಮಸ್ಕಿ ಹಾಗೂ ಲಿಂಗಸುಗೂರು ತಾಲ್ಲೂಕುಗಳಲ್ಲಿ ರಾತ್ರಿ ಕೂಡಾ ಮಳೆ ಸುರಿದಿದೆ. ಹಳ್ಳಗಳು ತುಂಬಿ ಹರಿಯುತ್ತಿದ್ದು, ಜಮೀನುಗಳಲ್ಲಿ ನೀರು ಸಂಗ್ರಹವಾಗಿದೆ. ಪಟ್ಟಣದಲ್ಲಿ ಕಚ್ಚಾರಸ್ತೆಗಳು ಕೆರೆಗಳಂತಾಗಿವೆ. ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ.
ದೇವದುರ್ಗ ಬಸ್ ನಿಲ್ದಾಣ ಪಕ್ಕದ ರಾಜಕಾಲುವೆ ಭರ್ತಿಯಾಗಿ ನಿಲ್ದಾಣದೊಳಗೆ ನುಗ್ಗಿದ್ದರಿಂದ ಪ್ರಯಣಿಕರು ಹೊರಬರಲು ಮತ್ತು ನಿಲ್ದಾಣದೊಳಗೆ ಹೋಗಲು ಪರದಾಡುವಂತಾಗಿದೆ.
ಮಾನ್ವಿ, ಸಿಂಧನೂರು, ಸಿರವಾರಗಳಲ್ಲಿ ತರಕಾರಿ ವ್ಯಾಪಾರಿಗಳು, ಹಾಲು, ಪೇಪರ್ ಹಾಕುವವರು ಬಾರಿ ಮಳೆಯಿಂದ ಸಂಕಷ್ಟ ಅನುಭವಿಸಿದರು.
ರಾಯಚೂರು ನಗರದಲ್ಲಿ 10 ನಿಮಿಷ ಮಾತ್ರ ಬಿರುಸಿನಿಂದ ಮಳೆ ಸುರಿಯಿತು.
ಜಿಲ್ಲೆಯಲ್ಲಿ 44 ಮಿಲಿಮೀಟರ್ ದಾಖಲಾಗಿದೆ. ಮಸ್ಕಿ ತಾಲ್ಲೂಕಿನ ಗುಡದೂರ ಹೋಬಳಿಯಲ್ಲಿ 104 ಮಿಲಿಮೀಟರ್, ಸಿಂಧನೂರು ತಾಲ್ಲೂಕಿನ ಹುಡಾ ಹೋಬಳಿಯಲ್ಲಿ 98.8 ಮಿಲಿಮೀಟರ್, ಹಟ್ಟಿ ಹೋಬಳಿಯಲ್ಲಿ 62 ಮಿಲಿಮೀಟರ್ ಮಳೆಬಿದ್ದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.