ರಾಯಚೂರು: ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿಯಿಡೀ ಮಳೆ ಸುರಿದಿದ್ದು,ಮಾಪಕದಲ್ಲಿ 48 ಮಿಲಿಮೀಟರ್ ದಾಖಲಾಗಿದೆ. ಅತಿಹೆಚ್ಚು ಮಳೆ ಬಿದ್ದಿರುವ ರಾಯಚೂರು ತಾಲ್ಲೂಕಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಯಾವುದೇ ಜೀವಹಾನಿಯಾಗಿಲ್ಲ.
ನಗರದ ಇಳಿಜಾರು ಪ್ರದೇಶದ ಬಡಾವಣೆಗಳಾದ ಜಹೀರಾಬಾದ್, ಸಿಯಾತಾಲಾಬ್, ಜಲಾಲನಗರ, ನೀರಭಾವಿಕುಂಟಾದ ಮನೆಗಳಲ್ಲಿ ನೀರು ನುಗ್ಗಿದೆ. ದವಸಧಾನ್ಯಗಳೆಲ್ಲವೂ ನೀರುಪಾಲು ಆಗಿದ್ದರಿಂದ ಕೂಡಲೇ ಮೂರು ಕಡೆಗಳಲ್ಲಿ ‘ಪರಿಹಾರ ಕೇಂದ್ರ’ಗಳನ್ನು ಆರಂಭಿಸುವುದಕ್ಕೆ ಶಾಸಕ ಡಾ.ಶಿವರಾಜ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಜನರಿಗೆ ಪರಿಹಾರ ಕೇಂದ್ರಗಳಲ್ಲಿ ಆಹಾರ ನೀಡಲಾಗುತ್ತಿದೆ.
ರಾಯಚೂರಿನ ಜೆಸ್ಕಾಂ ಕಚೇರಿ ಪಕ್ಕದ ರಾಜಕಾಲುವೆ ತುಂಬಿಹರಿದಿದ್ದು, ಆವರಣವು ಜಲಾವೃತವಾಗಿದೆ. ಇಳಿಜಾರು ಪ್ರದೇಶದಲ್ಲಿ ನಿರ್ಮಿಸಿರುವ ರಿಲಯನ್ಸ್ ಮಾರ್ಟ್ಗೂ ನೀರು ನುಗ್ಗಿದೆ.
ಬೆಳೆಹಾನಿ: ರಾಯಚೂರು ತಾಲ್ಲೂಕಿನ ಯರಗುಂಟಾ ಬಳಿ ನಾರಾಯಣಪುರ ಬಲದಂಡೆ ಕಾಲುವೆ (ಎನ್ಆರ್ಬಿಸಿ) ಒಡೆದಿದ್ದು, ಅಪಾರ ಪ್ರಮಾಣದ ಹತ್ತಿ, ಮೆಣಸಿನಕಾಯಿ ಬೆಳೆ ಕೊಚ್ಚಿಹೋಗಿದೆ.
ಯರಗುಂಟಾ, ಶಾಖವಾದಿ, ಯದ್ಲಾಪುರ, ಬೂರ್ದಿಪಾಡ, ಆತ್ಕೂರು, ಡಿ.ರಾಂಪೂರ ಗ್ರಾಮಗಳಲ್ಲಿ ಹಳ್ಳಗಳು ಎಲ್ಲೆಮೀರಿ ಹರಿಯುತ್ತಿವೆ. ಸಂಪರ್ಕ ರಸ್ತೆಗಳು ಕಾಲುವೆಗಳಾಗಿ ಮಾರ್ಪಟ್ಟಿವೆ. ತಾಲ್ಲೂಕು ಕೇಂದ್ರ ರಾಯಚೂರಿಗೆ ಸಂಪರ್ಕ ಕಡಿತವಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಮರುಸ್ಥಾಪನೆಗೆ ಜೆಸ್ಕಾಂ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.