ADVERTISEMENT

ರಾಯಚೂರು: ಭಾರಿ ಮಳೆಗೆ ಗ್ರಾಮ ಜೀವನ ತತ್ತರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 5:16 IST
Last Updated 19 ಸೆಪ್ಟೆಂಬರ್ 2020, 5:16 IST
ಗುಂಜಳ್ಳಿ ಹಳ್ಳವು ಭರ್ತಿಯಾಗಿ ಸಂಪರ್ಕ ರಸ್ತೆಯನ್ನು ಕಾಲುವೆ ಮಾಡಿದೆ
ಗುಂಜಳ್ಳಿ ಹಳ್ಳವು ಭರ್ತಿಯಾಗಿ ಸಂಪರ್ಕ ರಸ್ತೆಯನ್ನು ಕಾಲುವೆ ಮಾಡಿದೆ   

ರಾಯಚೂರು: ತಾಲ್ಲೂಕಿನಾದ್ಯಂತ ಶುಕ್ರವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಗ್ರಾಮೀಣ ಜನಜೀವನ ಅಸ್ತವ್ಯಸ್ತವಾಗಿದ್ದು, ಭೀತಿಗೊಳಗಾದ ಜನರು ಜಾಗರಣೆ ಮಾಡಿದ್ದಾರೆ.

ಮೂರು ದಿನಗಳಿಂದ ರಾತ್ರಿಯಿಡೀ ರಾಯಚೂರು ತಾಲ್ಲೂಕಿನಲ್ಲಿ ಮಾತ್ರ ವಾಡಿಕೆಗಿಂತ ಐದು ಪಟ್ಟು ಹೆಚ್ಚು ಮಳೆ ಸುರಿಯುತ್ತಿದೆ. ತೆಲಂಗಾಣ ಹಾಗೂ ಆಂಧ್ರಪ್ರದೇಶ ಗಡಿಗಳಿಗೆ ಹೊಂದಿಕೊಂಡಿರುವ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ಪಕ್ಕದ ರಾಯಚೂರು ತಾಲ್ಲೂಕಿನ ಗ್ರಾಮಜೀವನ‌ ತತ್ತರಿಸಿದೆ.

ಗುಂಜಳ್ಳಿ, ನೆಲಹಾಳ, ತಲಮಾರಿ, ಇಡಪನೂರ, ಮಿಡಗಲ್ ದಿನ್ನಿ, ಜೇಗರಕಲ್, ಹೊಸಪೇಟೆ, ಯರಗುಂಟಾ, ಶಾಖವಾದಿ, ಯದ್ಲಾಪುರ, ಬೂರ್ದಿಪಾಡ, ಆತ್ಕೂರು, ಡಿ.ರಾಂಪೂರ ಗ್ರಾಮಗಳಲ್ಲಿ ಹಳ್ಳಗಳು ಎಲ್ಲೆಮೀರಿ ಹರಿಯುತ್ತಿವೆ. ಸಂಪರ್ಕ ರಸ್ತೆಗಳು ಕಾಲುವೆಗಳಾಗಿ ಮಾರ್ಪಟ್ಟಿವೆ. ತಾಲ್ಲೂಕು ಕೇಂದ್ರ ರಾಯಚೂರಿಗೆ ಸಂಪರ್ಕ ಕಡಿತವಾಗಿದೆ.

ADVERTISEMENT

ಒಡೆದು ಹೋದ ಕಾಲುವೆ: ಮಳೆನೀರಿನ ರಭಸಕ್ಕೆ ನಾರಾಯಣಪುರ ಬಲದಂಡೆ ಕಾಲುವೆ (ಎನ್ ಆರ್‌ಬಿಸಿ) ಕೊನೆಯ ಭಾಗದಲ್ಲಿ ಯರಗುಂಟಾ ಸಮೀಪ ಒಡೆದಿದೆ. ಜಮೀನುಗಳಿಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದ ಬೆಳೆಹಾನಿ ಆಗಿದೆ. ಕಾಲುವೆ ಪಕ್ಕದ ಜಮೀನುಗಳ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.