ADVERTISEMENT

‘ರಾತ್ರಿ ವೇಳೆಯ ರಕ್ತಲೇಪನ ಕಾರ್ಯಕ್ಕೆ ಸಹಕರಿಸಿ‘

ಡಿಎಚ್‌ಒ ಡಾ ಸುರೇಂದ್ರಬಾಬು ಸಾರ್ವಜನಿಕರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 6:01 IST
Last Updated 24 ಜನವರಿ 2026, 6:01 IST
ದೇವದುರ್ಗ ತಾಲ್ಲೂಕಿನ ಗಬ್ಬೂರು ಪ್ರಾಥಮಿಕ ಅರೋಗ್ಯ ಕೇಂದ್ರ ವ್ಯಾಪ್ತಿಯ ಖಾನಾಪೂರ ಗ್ರಾಮದಲ್ಲಿ ರಾತ್ರಿ ವೇಳೆ ಹಮ್ಮಿಕೊಂಡ ರಕ್ತಲೇಪನ ಕಾರ್ಯವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರಬಾಬು ಪರಿಶೀಲಿಸಿದರು
ದೇವದುರ್ಗ ತಾಲ್ಲೂಕಿನ ಗಬ್ಬೂರು ಪ್ರಾಥಮಿಕ ಅರೋಗ್ಯ ಕೇಂದ್ರ ವ್ಯಾಪ್ತಿಯ ಖಾನಾಪೂರ ಗ್ರಾಮದಲ್ಲಿ ರಾತ್ರಿ ವೇಳೆ ಹಮ್ಮಿಕೊಂಡ ರಕ್ತಲೇಪನ ಕಾರ್ಯವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರಬಾಬು ಪರಿಶೀಲಿಸಿದರು   

ರಾಯಚೂರು: ಜಿಲ್ಲೆಯಲ್ಲಿ ಆನೆಕಾಲು ರೋಗ ಪತ್ತೆಗೆ ಆಯ್ದ ಗ್ರಾಮಗಳು, ವಲಸೆ ಪ್ರದೇಶಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಕೀಯ ತಂಡ ರಾತ್ರಿ ವೇಳೆ ಕೈಗೊಳ್ಳುವ ರಕ್ತ ಲೇಪನ ಕಾರ್ಯಕ್ಕೆ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ಮನವಿ ಮಾಡಿದರು.

ದೇವದುರ್ಗ ತಾಲ್ಲೂಕಿನ ಗಬ್ಬೂರು ಪ್ರಾಥಮಿಕ ಅರೋಗ್ಯ ಕೇಂದ್ರ ವ್ಯಾಪ್ತಿಯ ಖಾನಾಪುರ ಗ್ರಾಮದಲ್ಲಿ ರಾತ್ರಿ ವೇಳೆ ಹಮ್ಮಿಕೊಂಡ ರಕ್ತಲೇಪನ ಕಾರ್ಯವನ್ನು ಖುದ್ದು ಪರಿಶೀಲಿಸಿ ಗ್ರಾಮಸ್ಥರೊಂದಿಗೆ ಮಾತನಾಡಿದರು.

‘ಹಲವು ವಿಧದ ಸೊಳ್ಳೆಗಳು ಇದ್ದು, ಅದರಲ್ಲಿ ಕ್ಯೂಲೆಕ್ಸ್ ಸೊಳ್ಳೆಯು, ಆನೆಕಾಲು ರೋಗ ಹೊಂದಿದ ವ್ಯಕ್ತಿಗೆ ಕಚ್ಚಿ ಅದೆ ಸೊಳ್ಳೆ ಇನ್ನೊಬ್ಬರಿಗೆ ಕಚ್ಚಿದಾಗ ಬರಿಗಣ್ಣಿಗೆ ಕಾಣದ ‘ವುಚೆರೇರಿಯಾ ಬ್ಯಾಂಕ್ರೋಫ್ಟಿ’ ‘ಬ್ರೂಗಿಯಾ ಮಲಾಯಿ’ ಎಂಬ ಪರಾವಲಂಬಿ ನೂಲಿನಂತಹ ಹುಳುಗಳನ್ನು ಅವರ ದೇಹಕ್ಕೆ ವರ್ಗಾಯಿಸುತ್ತವೆ. ಈ ಹುಳುಗಳು ರಕ್ತ ಮತ್ತು ದುಗ್ಧರಸನಾಳಗಳಲ್ಲಿ ಬೆಳೆದು, ದ್ರವ ಹರಿಯದಂತೆ ತಡೆಯುತ್ತವೆ. ಇದರಿಂದ ಕೈ ಕಾಲುಗಳು ಆನೆಯ ಕಾಲಿನಂತೆ ದಪ್ಪವಾಗುವ ಮೂಲಕ ಶಾಶ್ವತವಾಗಿ ಆನೆಕಾಲು ರೋಗಕ್ಕೆ ಕಾರಣವಾಗುತ್ತಿದೆ’ ಎಂದು ವಿವರಿಸಿದರು.

ADVERTISEMENT

‘ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ, ನಗರದ ವಾರ್ಡ್‌ಗಳಲ್ಲಿ ರಾತ್ರಿ ವೇಳೆ ರಕ್ತ ಲೇಪನ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಜನರು ಸಹಕರಿಸಬೇಕು‘ ಎಂದು ವಿನಂತಿಸಿದರು.

ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಗಣೇಶ ಕೆ ಮಾತನಾಡಿ, ‘ಸಾಮಾನ್ಯವಾಗಿ ಆನೆಕಾಲು ರೋಗ ವ್ಯಕ್ತಿಯಲ್ಲಿ ಕಂಡುಬರಲು ದೀರ್ಘಾವಧಿ ತೆಗೆದುಕೊಳ್ಳುತ್ತದೆ. ಆರಂಭದಲ್ಲಿ ಜ್ವರ ಮತ್ತು ಚಳಿ, ಚರ್ಮದ ಮೇಲೆ ಸೋಂಕು ಹಾಗೂ ಕಾಲುಗಳು, ತೋಳುಗಳು, ಸ್ತನಗಳು ಅಥವಾ ಜನನಾಂಗದ ಭಾಗಗಳಲ್ಲಿ ಊತ ಕಂಡುಬರುತ್ತದೆ‘ ಎಂದು ಮಾಹಿತಿ ನೀಡಿದರು.

‘ಕ್ರಮೇಣ ಚರ್ಮವು ದಪ್ಪವಾಗಿ, ಗಟ್ಟಿಯಾಗಿ, ಗರುಸಾಗಿ ಆನೆ ಚರ್ಮದಂತೆ ಕಾಣಿಸುವುದು. ಇದರಿಂದ ಅತಿಯಾದ ನೋವು ಮತ್ತು ನಡೆಯಲು ಕಷ್ಟವಾಗುವುದು. ಇದನ್ನು ರೋಗ ಲಕ್ಷಣಗಳನುಸಾರ ನಿರ್ವಹಣೆ ಚಿಕಿತ್ಸೆ ಮಾತ್ರ ಸಾಧ್ಯವಿದ್ದು, ಸಂಪೂರ್ಣ ಗುಣಪಡಿಸಲು ಕಷ್ಟಕರ. ಹೀಗಾಗಿ ಮನೆಯ ಸುತ್ತಲು ಚರಂಡಿ, ತಿಪ್ಪೆಗಳ ಹತ್ತಿರ ಅನುಪಯುಕ್ತ ನೀರು ನಿಲ್ಲದಂತೆ ಹಾಗೂ ಮನೆ ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವಾಗ ಸೊಳ್ಳೆಯಿಂದ ಕಚ್ಚಿಸಿಕೊಳ್ಳದಂತೆ ಜಾಗೃತಿ ವಹಿಸಬೇಕು’ ಎಂದು ಹೇಳಿದರು.

ಗ್ರಾಮದ 105 ಜನರ ರಕ್ತ ಲೇಪನವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಿದ್ರಾಮೇಶ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹನುಮಂತರಾಯ ಹೂಗಾರ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಈರಾಕ್ಷಣಿ, ಸಿಎಚ್‌ಒ ಹರೀಶ್, ಆಶಾ ಕಾರ್ಯಕರ್ತೆ ಸಾಬಮ್ಮ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರ ತಂಡದ ಮೂಲಕ ಕೈಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.