ಶಕ್ತಿನಗರ: ಗುರ್ಜಾಪುರ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ ಆಶ್ರಯ ಮನೆಗಳ ಕಟ್ಟಡ ಕಾಮಗಾರಿಯನ್ನು ಭಾನುವಾರಮಳೆಯಲ್ಲೇ ವಸತಿ ಸಚಿವ ವಿ.ಸೋಮಣ್ಣ ವೀಕ್ಷಿಸಿದರು.
2009ರಲ್ಲಿ ನೆರೆಹಾವಳಿಗೆ ತುತ್ತಾದ ಗುರ್ಜಾಪುರ ಗ್ರಾಮಸ್ಥರಿಗೆ ನಿರ್ಮಿಸಲಾಗಿರುವ ಆಶ್ರಯ ಮನೆಗಳು ವಾಸಕ್ಕೆ ಯೋಗ್ಯವಿಲ್ಲದೇ ಪಾಳು ಬಿದ್ದಿವೆ. 30 ಎಕರೆಯಲ್ಲಿ ಒಟ್ಟು 295 ಮನೆಗಳನ್ನು ನಿರ್ಮಾಣ ಮಾಡಬೇಕಾಗಿತ್ತು. ಅದರಲ್ಲಿ 98 ಮನೆಗಳು ನಿರ್ಮಾಣಗೊಂಡಿವೆ. ನಿರ್ಮಿಸಿದ ಮನೆಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ. ಕಿಟಕಿಗಳು, ಬಾಗಿಲುಗಳು ಮುರಿದು ಹೋಗಿವೆ.
ಮನೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ, ನೂತನ ಗುಣಮಟ್ಟದ ಮನೆಗಳನ್ನು ನಿರ್ಮಿಸಿ, ಕುಡಿಯುವ ನೀರು, ಅಂಗನವಾಡಿ ಕಟ್ಟಡ, ಶಾಲಾ ಕಟ್ಟಡ, ಉಪ ಆರೋಗ್ಯ ಕಟ್ಟಡ ಸೇರಿ ಮೂಲ ಸೌಕರ್ಯ ಒದಗಿಸಿ ಅನುಕೂಲ ಮಾಡಿಕೊಡಬೇಕು. ನಿಜವಾದ ಫಲಾನುಭವಿಗಳಿಗೆ ಮನೆಗಳು ದೊರೆಯುವಂತಾಗಬೇಕು ಎಂದು ಸಚಿವ ಸೋಮಣ್ಣ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ,‘ರಾಯಚೂರು, ಮಾನ್ವಿ, ಸಿಂಧನೂರು, ದೇವದುರ್ಗ, ಮಸ್ಕಿ ಹಾಗೂ ಸಿರವಾರ ತಾಲ್ಲೂಕುಗಳಲ್ಲಿ ನೆರೆಹಾವಳಿಗೆ ತುತ್ತಾದ ಗ್ರಾಮಗಳನ್ನು ಸ್ಥಳಾಂತರಿಸಿ, ಮನೆಗಳನ್ನು ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುತ್ತದೆ’ ಎಂದರು.
ನಂತರ ಸಚಿವರು, ದೇವಸೂಗೂರು ಗ್ರಾಮದ ಸೂಗೂರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅಲ್ಲಿನ ಸಮಸ್ಯೆಗಳ ಕುರಿತು ಜನರು ಸಚಿವರ ಗಮನಕ್ಕೆ ತಂದರು.
ಶಾಸಕರಾದ ಬಸನಗೌಡ ದದ್ದಲ್, ಡಾ.ಶಿವರಾಜ ಪಾಟೀಲ, ಜಿಲ್ಲಾಧಿಕಾರಿ ಸತೀಶ, ಉಪ ವಿಭಾಗಧಿಕಾರಿ ಸಂತೋಷ ಕಾಮಗೌಡ, ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ್, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಮರೆಡ್ಡಿ ಪಾಟೀಲ, ದೇವಸೂಗೂರು ಹೋಬಳಿ ಉಪ ತಹಶೀಲ್ದಾರ್ ಮಹೇಶ, ಕಾಡ್ಲೂರು ಗ್ರಾಮ ಪಂಚಾಯಿತಿ ಪಿಡಿಒ ಚನ್ನಮ್ಮ , ಕಂದಾಯ ನಿರೀಕ್ಷಕ ಭೂಪತಿ, ಗ್ರಾಮಲೆಕ್ಕಾಧಿಕಾರಿ ಸುರೇಶ ಹಾಗೂ ಮಧುಕಾಂತ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.