
ಮರಳು ಅಕ್ರಮ ಸಾಗಣೆ
ರಾಯಚೂರು: ‘ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನಡೆದಿರುವ ಮರಳು ಅಕ್ರಮ ಸಾಗಣೆ ವಿರುದ್ಧ ಹಟ್ಟಿ ಚಿನ್ನದ ಗಣಿ ಕಂಪನಿಯ ನಾಲ್ವರು ಅಧಿಕಾರಿಗಳು ಹಾಗೂ ಇಬ್ಬರು ಗುತ್ತಿಗೆದಾರರ ವಿರುದ್ದ ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ಲೋಕಾಯುಕ್ತರೂ ಕ್ರಮ ಕೈಗೊಳ್ಳದಿದ್ದರೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು ಮಾಡಲಾಗುವುದು’ ಎಂದು ಸಾಮಾಜಿಕ ಕಾರ್ಯಕರ್ತರ ಹನಮಂತಪ್ಪ ಭಂಗಿ ತಿಳಿಸಿದರು.
‘ಮರಳು ದಂಧೆಯ ಹಿಂದೆ ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರ ಬೆಂಬಗಲಿಗರು ಇದ್ದಾರೆ’ ಎಂದು ನಗರದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋಪಿಸಿದರು.
‘ದೇವದುರ್ಗ ತಾಲ್ಲೂಕಿನ ಹೇರುಂಡಿ ಮತ್ತು ಕರ್ಕಿಹಳ್ಳಿ, ಯಾದಗಿರಿ ಜಿಲ್ಲೆಯ ಚೌಡೇಶ್ವರಾಳ ಮತ್ತು ಹೀರೆರಾಯಕುಂಪಿಯಲ್ಲಿ ಮರಳು ಅಕ್ರಮ ದಂಧೆ ನಡೆಯುತ್ತಿದೆ. ದಂಧೆಕೋರರ ಬೆಂಬಲಕ್ಕೆ ಸಚಿವರು, ಶಾಸಕರು ಹಾಗೂ ಪ್ರಭಾವಿಗಳು ಇರುವ ಕಾರಣ ಅಕ್ರಮ ಬಹಿರಂಗವಾಗಿಯೇ ನಡೆದಿದೆ’ ಎಂದರು.
‘ಮರಳು ಸಾಗಣೆ ಮಾಡುವ ವಾಹನಗಳಿಗೆ ಜಿಪಿಆರ್ಎಸ್ ಅಳವಡಿಸಿಲ್ಲ. ಮರಳು ಸಾಗಣೆ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ. ಸ್ಟಾಕ್ ಯಾರ್ಡ್ ಗಡಿ ನಿಗದಿಪಡಿಸಿಲ್ಲ. ವೇ ಬ್ರೀಜ್ ದತ್ತಾಂಶಗಳನ್ನೇ ಅಳಿಸಿ ಹಾಕಲಾಗಿದೆ. ಇದರಿಂದ ಸರ್ಕಾರಕ್ಕೆ ಬರುವ ಆದಾಯ ಖೋತಾ ಆಗುತ್ತಿದೆ’ ಎಂದು ಆರೋಪಿಸಿದರು.
ಶಿವರಾಜ ಹಾಗೂ ಮಲ್ಲಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.