ರಾಯಚೂರು: ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಹತ್ತಿ ವಹಿವಾಟು ಜೋರಾಗಿದೆ. ಅಕ್ಟೋಬರ್ನಲ್ಲಿ ಶುರುವಾಗಿರುವ ಪ್ರಕ್ರಿಯೆ ಈಗಲೂ ಬಿರುಸಾಗಿಯೇ ಸಾಗಿದೆ. ನಿತ್ಯ ಸರಾಸರಿ 250 ವಾಹನಗಳು ಇಲ್ಲಿಗೆ ಬರುತ್ತಿವೆ.
ವೇಬ್ರಿಡ್ಜ್ಗಳಲ್ಲೂ ರೈತರು ತಮ್ಮ ವಾಹನಗಳನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಹತ್ತಿ ತೂಕ ಮಾಡಿಕೊಂಡು ಜಿನ್ನಿಂಗ್ ಫ್ಯಾಕ್ಟರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಎಪಿಎಂಸಿಯಿಂದ ವೇಬ್ರಿಡ್ಜ್ ನಿರ್ಮಿಸಬೇಕು ಎನ್ನುವ ಬೇಡಿಕೆ ಇನ್ನೂ ಈಡೇರಿಲ್ಲ. ಜಿಲ್ಲೆಗೆ ಬಂದಿದ್ದ ಎಪಿಎಂಸಿ ಸಚಿವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ.
‘ಭಾರತೀಯ ಹತ್ತಿ ನಿಗಮವು ಕನಿಷ್ಠ ಬೆಂಬಲ ಯೋಜನೆ ಅಡಿಯಲ್ಲಿ ರೈತರಿಂದ ಹತ್ತಿ ಖದೀದಿಸಲು ಅಕ್ಟೋಬರ್ 5ರಂದು ಆದೇಶ ಹೊರಡಿಸಿದೆ. ಕೃಷಿ ಮಾರಾಟ ಇಲಾಖೆ ಅಕ್ಟೋಬರ್ನಲ್ಲೇ ಜಿಲ್ಲೆಯಲ್ಲಿಒಟ್ಟು 16 ಹತ್ತಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿದೆ. ಖರೀದಿ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆದಿದೆ’ ಎಂದು ಕೃಷಿ ಮಾರಾಟ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಬಿ. ಹೇಳಿದರು.
ಹೈಬ್ರೀಡ್–44 ಹತ್ತಿಯು ಕಳೆದ ಅಕ್ಟೋಬರ್ನಲ್ಲಿ ಕನಿಷ್ಠ ₹ 6,400ರಿಂದ ಗರಿಷ್ಠ ₹ 8,400ಗೆ ಮಾರಾಟವಾಗಿದೆ. ಶನಿವಾರ ಕನಿಷ್ಠ ₹ 6,000ರಿಂದ ಗರಿಷ್ಠ ₹ 7,600ಗೆ ಹಾಗೂ ಸೋಮವಾರ ಕನಿಷ್ಠ ₹ 7,200ರಿಂದ ಗರಿಷ್ಠ ₹ 7,550ಗೆ ಮಾರಾಟವಾಗಿದೆ. ನೆರೆಯ ಜಿಲ್ಲೆಗಳ ರೈತರು ಸಹ ರಾಯಚೂರು ಎಪಿಎಂಸಿಗೆ ಬಂದು ಹತ್ತು ಮಾರಾಟ ಮಾಡುತ್ತಿದ್ದಾರೆ.
‘ಜಿಲ್ಲೆಯಲ್ಲಿ ಸಮೃದ್ಧವಾದ ಹತ್ತಿ ಫಸಲು ಬಂದಿದೆ. ರೈತರು ಸೆಪ್ಟೆಂಬರ್ನಿಂದ ಮಾರುಕಟ್ಟೆಗೆ ಹತ್ತಿ ತರುತ್ತಿದ್ದಾರೆ. ಮಾರ್ಚ್ ಅಂತ್ಯದ ವರೆಗೂ ಹತ್ತಿ ಬರುವ ನಿರೀಕ್ಷೆ ಇದೆ’ ಎಂದು ಎಪಿಎಂಸಿ ಅಧಿಕಾರಿಗಳು ಅಂದಾಜಿಸಿದ್ದಾರೆ.
‘ತಡವಾಗಿ ಬಿತ್ತನೆ ಮಾಡಿದ್ದರಿಂದ ಫಸಲು ಸಹ ವಿಳಂಬವಾಗಿ ಬಂದಿದೆ. ಶನಿವಾರ ಹತ್ತಿ ಪ್ರತಿ ಕ್ವಿಂಟಲ್ಗೆ ₹ 7,600ರ ವರೆಗೆ ಮಾರಾಟವಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಕಾರಣ ಖರೀದಿದಾರರು ದಿಢೀರ್ ಆಗಿ ಪ್ರತಿ ಕ್ವಿಂಟಲ್ಗೆ ₹ 50 ಕಡಿಮೆ ಮಾಡಿದ್ದಾರೆ’ ಎಂದು ಮಾನ್ವಿ ತಾಲ್ಲೂಕಿನ ರೈತ ನರಸಿಂಹಲು ತಿಳಿಸಿದರು.
‘ರಾಯಚೂರು ಜಿಲ್ಲೆಯಲ್ಲಿ ಕಳೆದ ವರ್ಷ 8 ಲಕ್ಷ ಬೇಲ್ ಹತ್ತಿ ಮಾರುಕಟ್ಟೆಗೆ ಬಂದಿತ್ತು. ಪ್ರಸ್ತಕ 8.50 ಲಕ್ಷ ಬೇಲ್ ಹತ್ತಿ ಬಂದಿದೆ. ಮಾರ್ಚ್ ಅಂತ್ಯಕ್ಕೆ ಒಟ್ಟು 9 ಲಕ್ಷ ಬೇಲ್ ಆಗಲಿದೆ. ಕೊಯಮುತ್ತೂರು ಹಾಗೂ ಮಹಾರಾಷ್ಟ್ರದ ಇಚಲಕರಂಜಿಗೆ ಹೋಗುತ್ತಿದೆ’ ಎಂದು ರಾಯಚೂರು ಕಾಟನ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.