
ರಾಯಚೂರು: ಒಳ ಮೀಸಲಾತಿ ಜಾರಿಯಾಗುವವರೆಗೆ ಹಳೆಯ ಪದ್ದತಿ ಮುಂದುವರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಛಲುವಾದಿ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ನೀತಿಶ್ ಕೆ. ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯದಲ್ಲಿ ಒಳಮೀಸಲಾತಿ ಜಾರಿ ನಂತರ ಉಂಟಾದ ಆಡಳಿತಾತ್ಮಕ ಗೊಂದಲಗಳು, ನ್ಯಾಯಾಲಯದ ಅಡೆತಡೆಗಳು ಹಾಗೂ ರೋಸ್ಟರ್ ಬಿಂದುಗಳ ವೈಜ್ಞಾನಿಕತೆಯ ಕೊರತೆಯಿಂದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿಯ ಪ್ರವರ್ಗ ಎ, ಬಿ, ಸಿಗಳಿಗೆ 6+6+5 ಪ್ರಮಾಣದ ಸಮನ್ವಯ ಹಂಚಿಕೆ ಆಗುವಂತೆ ನೇಮಕಾತಿ ಪ್ರಾಧಿಕಾರಗಳನ್ನು ಒಟ್ಟು ಘಟಕವಾಗಿ ಪರಿಗಣಿಸಿ ಅಧಿಸೂಚನೆ ಹೊರಡಿಸಬೇಕು. ವಿಶೇಷವಾಗಿ 1 ಅಥವಾ 2 ಹುದ್ದೆಗಳಿರುವಲ್ಲಿ ಮೀಸಲಾತಿ ಸಮತೋಲನ ಕಾಪಾಡಲು ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಪ್ರತ್ಯೇಕ ಮೀಸಲಾತಿ ಘಟಕ ರಚಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ರವೀಂದ್ರ ಪಟ್ಟಿ, ಶಿವರಾಜ ಜಾನೇಕಲ್, ಕೆ. ಯಲ್ಲಪ್ಪ ಬೊಮ್ಮನಾಳ, ಈರಣ್ಣ, ವೀರೇಶ ಹಂಚಿನಾಳ, ಮರಿಲಿಂಗಪ್ಪ ಅರಿಕೇರಾ, ಬಿ,.ಶ್ರೀನಿವಾಸ, ನರಸಿಂಹಲು ನೆಲಹಾಳ, ಮಹೇಶ, ರಮೇಶ, ಕಿರಣ್, ಮೂಕಪ್ಪ, ಭಾಸ್ಕರ, ದುರ್ಗಪ್ಪ, ಹನುಮಂತ, ರಾಮಣ್ಣ, ಕುಬೇರಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.