ಜಾಲಹಳ್ಳಿ: ಸಮೀಪದ ಲಿಂಗದಹಳ್ಳಿ ಗ್ರಾಮಕ್ಕೆ ಮಂಗಳವಾರ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಪ್ರಕಾಶ ಕೃಷ್ಣಾ ನದಿಯ ದಂಡೆಯಲ್ಲಿ ರೈತರು ಬಿತ್ತನೆ ಮಾಡಿರುವ ವಿವಿಧ ಬೆಳೆಗಳ ಸ್ಥಳ ಪರಿಶೀಲನೆ ಮಾಡಿದರು.
ನದಿಯಲ್ಲಿ ಪ್ರವಾಹ ಉಂಟಾಗಿರುವ ಕಾರಣ ನದಿದಂಡೆಯಲ್ಲಿ ರೈತರ ಬೆಳೆ ಏನಾದರೂ ನಷ್ಟವಾಗಿರುವ ಬಗ್ಗೆ ಪ್ರತ್ಯಕ್ಷ ವೀಕ್ಷಣೆ ಮಾಡುವ ಉದ್ದೇಶದಿಂದ ಭೇಟಿ ನೀಡಿ ಪರಿಶೀಲಿಸಿದರು.
ನಂತರ ರೈತರೊಂದಿಗೆ ಬೆಳೆಗಳ ಬಗ್ಗೆ ಜಾಗೃತಿ ಮೂಡಿಸುವ ಸಭೆಯಲ್ಲಿ ಮಾತನಾಡಿ, ರೈತರು ಅತಿಯಾದ ಯೂರಿಯಾ ಬಳಕೆಯಿಂದ ಸಸ್ಯಗಳ ಬೆಳವಣಿಗೆ ಹೆಚ್ಚಾಗುತ್ತದೆ ಹೊರತು, ಬೆಳೆಗಳಲ್ಲಿ ಕಾಳು, ಕಾಯಿ ಕಟ್ಟುವ ಪ್ರಮಾಣ ಕಡಿಮೆಯಾಗಿ ಇಳುವರಿಯಲ್ಲಿ ನಷ್ಟವಾಗುತ್ತದೆ. ಅಲ್ಲದೇ ಕೀಟ, ರೋಗ ಬಾಧೆ ಜೊತೆಗೆ ಭೂಮಿ ಫಲವತ್ತತೆ ಹಾಳಾಗುವ ಸಾಧ್ಯತೆ ಹೆಚ್ಚು. ಅದ್ದರಿಂದ ರೈತರು ತಮ್ಮ ಹೊಲಗಳಿಗೆ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಅಜೊಲ್ಲಾ ಮತ್ತು ಡಯಾಂಚ ಬೀಜ ಹಾಗೂ ಇತರೆ ಪರ್ಯಾಯ ಯುರಿಯಾ ರಸಗೊಬ್ಬರಗಳು ಬಳಸುವುದು ಸೂಕ್ತ ಎಂದು ತಿಳಿಸಿದರು.
ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಶ್ರೀನಿವಾಸ್ ನಾಯಕ ಮಾತನಾಡಿ, 2024-25ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಳೆ ವಿಮೆಯನ್ನು ನೋಂದಣಿ ಮಾಡಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿ ಹನುಮಂತ ರಾಯ ಕುರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.