ರಾಯಚೂರು: ಡಾ. ಎ.ಪಿ.ಜಿ.ಅಬ್ದುಲ್ ಕಲಾಂ ಅವರು ಅತ್ಯಂತ ಸರಳವಾಗಿ ಬದುಕಿ ಇಡೀ ವಿಶ್ವಕ್ಕೆ ಮಾದರಿಯಾದ ಹಿರಿಮೆ ಅವರದು ಎಂದು ಕಿಲ್ಲೆ ಬೃಹನ್ಮಠದ ಪೀಠಾಧಿಪತಿ ಶಾಂತಮಲ್ಲ ಶಿವಾಚಾರ್ಯ ಸ್ವಾಮಿ ಹೇಳಿದರು.
ನಗರದ ಶ್ರೀ ವೆಂಕಟೇಶ್ವರ ಪದವಿ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಯಾಪಲದಿನ್ನಿಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಮಾಜ ಸೇವಾ ಸಂಸ್ಥೆಯ ದಶಮಾನೋತ್ಸವ ಮತ್ತು 5ನೇ ವರ್ಷದ 'ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅತ್ಯುತ್ತಮ ಪ್ರಶಸ್ತಿ' ಪ್ರಧಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ರಾಜಯೋಗಿನಿ ಬಿ.ಕೆ.ಸ್ಮಿತಾ ಅಕ್ಕ ಮಾತನಾಡಿ, ಸಂಸ್ಥೆಯು ಒಂದು ಶಿಕ್ಷಣಪರ ಮತ್ತು ಸಮಾಜಮುಖಿ ಸಂಸ್ಥೆಯಾಗಿದೆ. ಕಳೆದ ಐದು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿನ ಜಿಲ್ಲೆಯ ಸಾಧಕರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಸಂತೋಷ್ ಕಾಮಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಏಳಿಗೆಗಾಗಿ ಎಲೆಮರೆಯ ಕಾಯಿಗಳಂತೆ ಶ್ರಮಿಸುತ್ತಿರುವ ಅನೇಕರು ನಮ್ಮ ನಡುವೆ ಇದ್ದಾರೆ. ಪ್ರಚಾರ ಮತ್ತು ಪ್ರಶಸ್ತಿಗಳನ್ನು ಬಯಸದೇ ತಮ್ಮ-ತಮ್ಮ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡುತ್ತಿದ್ದಾರೆ. ಅಂಥವರನ್ನು ಗುರುತಿಸಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅತ್ಯುತ್ತಮ ಪ್ರಶಸ್ತಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಗಾಯಕಿ ಮೋನಮ್ಮ, ಶಿಕ್ಷಣ ಪ್ರೇಮಿ ರಮೇಶ್ ಬಲ್ಲಿದ್, ತಜ್ಞ ವೈದ್ಯ ಡಾ. ವೆಂಕಟೇಶ್.ವೈ.ನಾಯಕ, ಬ್ರಝಿಲ್ ದೇಶದಲ್ಲಿ ಹಿರಿಯ ಎಂಜಿನಿಯರ್ ಆಗಿರುವ ಜಿಲ್ಲೆಯ ಶಿಕ್ಷಣ ಪ್ರೇಮಿ ರಂಗರಾವ್ ದೇಸಾಯಿ, ಪತ್ರಕರ್ತ ವಿಜಯ್ ಸರೋದೆ, ಇಫಾ ಫೌಂಡೇಶನ್ನ ಮೊಹಮ್ಮದ್ ಸಾಜೀದ್ ಸೇರಿ ಒಟ್ಟು 15 ಸಾಧಕರಿಗೆ ಪ್ರಶಸ್ತಿ ವಿತರಿಸಲಾಯಿತು.
ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಓಂ ಸಾಯಿ ಧ್ಯಾನ ಮಂದಿರದ ಅಧ್ಯಕ್ಷ ಸಾಯಿಕಿರಣ್ ಆದೋನಿ, ಗ್ರೀನ್ ರಾಯಚೂರು ಸಂಸ್ಥೆಯ ಕಾರ್ಯದರ್ಶಿ ರಾಜೇಂದ್ರ ಎಸ್.ಶಿವಾಳೆ, ಸಿರವಾರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಅಮರೇಗೌಡ, ರಾಜಶೇಖರಪ್ಪ ಸಾಹುಕಾರ, ರಾಕೇಶ್ ರಾಜಲಬಂಡ ಇದ್ದರು. ಸಂಸ್ಥೆಯ ಕಾರ್ಯದರ್ಶಿ ನರಸಿಂಹಲು ಯಾಪಲದಿನ್ನಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.