ಮಸ್ಕಿ: ‘ದೇಶ ಗೆಲ್ಲುವುದು ಬಹಳ ಸುಲಭ, ಆದರೆ, ನನ್ನ ನಾನು ಗೆಲ್ಲುವುದು ಕಠಿಣ. ನನ್ನ ನಾನು ಗೆದ್ದರೆ ಅದೇ ನಿಜವಾದ ಗೆಲುವು’ ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಸವರಾಜ ಕೊಡಗುಂಟಿ ಹೇಳಿದರು.
ಪಟ್ಟಣದ ಗಚ್ಚಿನಮಠದಲ್ಲಿ ಭಾನುವಾರ ಕಸಾಪ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಸಾಹಿತ್ಯವೂ ಯಾವ ರೀತಿ ಬದುಕಬೇಕು ಎಂದು ಕಲಿಸುವ ಜತೆಗೆ ಯಾವ ರೀತಿಯಾಗಿ ಬದಕಬಾರದು ಎಂಬುದನ್ನು ನಮಗೆ ಹೇಳಿ ಕೊಡುತ್ತದೆ. ಸಾಹಿತ್ಯವೂ ಕೂಡ ಬದುಕನ್ನು ಹಸನಾಗಿಸುವ ಕಾರ್ಯ ಮಾಡುತ್ತಿದೆ. ಸಾಹಿತ್ಯವನ್ನು ಓದಿ ತಿಳಿಸುಕೊಳ್ಳಬೇಕು’ ಎಂದು ಹೇಳಿದರು.
‘ಬರೆಯುವುದು ಮಾತ್ರ ಸಾಹಿತ್ಯವಲ್ಲ, ಓದುವುದು ಸಹ ಸಾಹಿತ್ಯದ ಒಂದು ಭಾಗ. ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯದ ಕೆಲಸ ಮಾಡುವ ಮೂಲಕ ಜನ ಸಾಮಾನ್ಯರಿಗೆ ಹತ್ತಿರವಾಗಲಿ’ ಎಂದು ಹೇಳಿದರು.
ಸಾಹಿತಿ ಮಹಾಂತೇಶ ಮಸ್ಕಿ ಮಾತನಾಡಿ, ‘ಕಸಾಪ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳು ಬರುವ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಸಾಹಿತ್ಯದ ಚಟುವಟಿಕೆ ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷೆ ವಿದ್ಯಾವತಿ ವನಕಿ ಮಾತನಾಡಿ, ‘ಎಲ್ಲ ಸಾಹಿತ್ಯಾಸಕ್ತರ ಸಹಕಾರದಿಂದ ಬರುವ ದಿನಗಳಲ್ಲಿ ಪರಿಷತ್ತಿನ ಕೆಲಸಗಳನ್ನು ಮಾಡಲಾಗುವುದು’ ಎಂದರು.
ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಪರಿಷತ್ತಿನ ಮಾಜಿ ಅಧ್ಯಕ್ಷ ಘನಮಠದಯ್ಯ ಸಾಲಿಮಠ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಂಪಾಪತಿ ಹೂಗಾರ, ರಮಾದೇವಿ ಶಂಬೋಜಿ ಇತರರು ಹಾಜರಿದ್ದರು.
ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಬ್ಯಾಳಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿದ್ಯಾವತಿ ವನಕಿ ಅವರಿಗೆ ಕನ್ನಡ ಬಾವುಟ ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.