ರಾಯಚೂರು: ಕನ್ನಡ ಸಾಹಿತ್ಯ ಪರಿಷತ್ತು ಉದಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರು ಮಾಡಿದ ಶ್ರಮ ಅನನ್ಯ ಅವರ ಸೇವೆ ದೇಶಕ್ಕೆ ಮಾದರಿಯಾಗಿದೆ. ಅವರು ಕಟ್ಟಿರುವ ಕನ್ನಡ ಸಾಹಿತ್ಯ ಪರಿಷತ್ತು ಇಂದು ಕನ್ನಡ ನಾಡು ನುಡಿ ಭಾಷೆಗಾಗಿ ನಿರಂತರ ಶ್ರಮಿಸುತ್ತಿದೆ ಎಂದು ಸಾಹಿತಿ ರವಿ ರಾಜೇಶ್ವರ್ ಹೇಳಿದರು.
ನಗರದ ನಂದಿನಿ ಮಹಾವಿದ್ಯಾಲಯದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಗುರುವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 108ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು,ನುಡಿ ಮತ್ತು ಸಂಸ್ಕೃತಿಗಾಗಿ ದುಡಿಯುತ್ತಿದ್ದು, ಕನ್ನಡಿಗರ ಎದೆಯಾಳದಲ್ಲಿ ಹಚ್ಚ ಹಸಿರಾಗಿ ಉಳಿದಿದೆ. 1915 ರಿಂದ ಇಲ್ಲಿಯವರೆಗೆ ಕನ್ನಡ ಸಾಹಿತ್ಯ, ಭಾಷೆ ಬೆಳವಣಿಗೆಗೆ ಅನೇಕ ಕಾರ್ಯಕ್ರಮಗಳನ್ನು ಮಾಡಿ, ಸಾಹಿತಿಗಳಿಗೆ, ವಿದ್ವಾಂಸರಿಗೆ, ಪ್ರೋತ್ಸಾಹಗಳನ್ನು ನೀಡಿ ಅವರ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ಕನ್ನಡನಾಡಿನ ಭಾಷೆ ಭಿನ್ನರಲ್ಲಿ ಐಕ್ಯಮತವನ್ನು, ಪರಸ್ಪರ ಸೌಹಾರ್ದವನ್ನು ಹೆಚ್ಚಿಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡಿದೆ. ಕನ್ನಡವನ್ನಾಡುವ ಜನಸಾಮಾನ್ಯರಲ್ಲಿ ಲೋಕವ್ಯವಹಾರ ಜ್ಞಾನವು ಹರಡುವಂತೆ ಕನ್ನಡ ಪುಸ್ತಕಗಳ ಪ್ರಕಟಣೆ, ಕನ್ನಡ ಕಾವ್ಯ, ಜಾಣ, ಪರೀಕ್ಷೆಗಳನ್ನು ನಡೆಸಿದ ಕೀರ್ತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ. ಹಾಗೆಯೇ ಕರ್ನಾಟಕದ ಏಕೀಕರಣ ಚಳವಳಿಗೆ ಒತ್ತು ನೀಡಿದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಆಗಿದೆ ಎಂದು ಹೇಳಿದರು.
ನಂದಿನಿ ಮಹಾವಿದ್ಯಾಲಯದ ಪ್ರಾಂಶುಪಾಲ ವಿಜಯಕುಮಾರ್ ಕಟ್ಟಿಮನಿ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡಿನಲ್ಲಿ ಇರುವ ಕನ್ನಡಿಗರಿಗೆ ಭಾಷೆಯ ಬಗ್ಗೆ ಪ್ರಜ್ಞೆಯನ್ನು ಮೂಡಿಸುವ ಕೆಲಸ ಮಾಡಿದೆ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಛಾಯಾಗ್ರಾಹಕ ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಅಭಿಮಾನಿ ಅನ್ವರ್ ಖಾನ್, ಸ್ನಾತಕೋತ್ತರ ಪದವಿಯಲ್ಲಿ ಕನ್ನಡ ಭಾಷೆಯಲ್ಲಿ 12 ಚಿನ್ನದ ಪದಕವನ್ನು ಪಡೆದ ಪೂರ್ಣಿಮಾ ಗಾಣದಾಳ ಅವರಿಗೆ ಸನ್ಮಾನಿಸಲಾಯಿತು.
ವೆಂಕಟೇಶ್ ನವಲಿ, ರೇಖಾ ಬಡಿಗೇರ್ ಇದ್ದರು.
ಗೌರವ ಕಾರ್ಯದರ್ಶಿ ರಾವುತರಾವ್ ಬರೂರ ಸ್ವಾಗತಿಸಿದರು. ಆಂಜನೇಯ ಕಾವಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಾಶಂಕರ್ ವಕೀಲರು ವಂದಿಸಿದರು. ಬಿ. ವಿಜಯರಾಜೇಂದ್ರ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.