ADVERTISEMENT

ಕವಿತಾಳ: ಮಾಲಾಧಾರಿಗಳಿಗೆ ಮುಸ್ಲಿಮರ ಮನೆ ಭೋಜನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2024, 15:24 IST
Last Updated 28 ಡಿಸೆಂಬರ್ 2024, 15:24 IST
ಕವಿತಾಳದ ಮುಸ್ಲಿಂ ಸಮಾಜದ ಮುಖಂಡ ಬಿ.ಎ.ಕರೀಂಸಾಬ್‌ ಶನಿವಾರ ತಮ್ಮ ಮನೆಯಲ್ಲಿ ಅಯ್ಯಪ್ಪ ಭಕ್ತರಿಗೆ ಊಟ ಬಡಿಸಿದರು
ಕವಿತಾಳದ ಮುಸ್ಲಿಂ ಸಮಾಜದ ಮುಖಂಡ ಬಿ.ಎ.ಕರೀಂಸಾಬ್‌ ಶನಿವಾರ ತಮ್ಮ ಮನೆಯಲ್ಲಿ ಅಯ್ಯಪ್ಪ ಭಕ್ತರಿಗೆ ಊಟ ಬಡಿಸಿದರು   

ಕವಿತಾಳ (ರಾಯಚೂರು ಜಿಲ್ಲೆ): ಪಟ್ಟಣದ ಮುಸ್ಲಿಂ ಸಮಾಜದ ಮುಖಂಡ ಬಿ.ಎ.ಕರೀಂಸಾಬ್‌ ಅವರು ತಮ್ಮ ಮನೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಶನಿವಾರ ಪ್ರಸಾದ ವ್ಯವಸ್ಥೆ ಮಾಡುವ ಮೂಲಕ ಭಾವೈಕ್ಯ ಮೆರೆದರು.

ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಬಿ.ಎ.ಕರೀಂಸಾಬ್‌ ಸ್ವತಃ ಊಟ ಬಡಿಸಿದರು. ಹೋಳಿಗೆ, ಲಡ್ಡು, ಚಪಾತಿ, ಪಲ್ಯ, ಹಸಿ ತರಕಾರಿ, ಅನ್ನ, ಸಾಂಬಾರು ಉಣಬಡಿಸಿದರು.

‘ಅಯ್ಯಪ್ಪ ಸ್ವಾಮಿ ಭಕ್ತರಾಗಲು ಯಾವುದೇ ಜಾತಿ, ಧರ್ಮದ ಭೇದವಿಲ್ಲ. ಹೀಗಾಗಿ ಕಳೆದ ಮೂರು ವರ್ಷಗಳಿಂದ ಅಯ್ಯಪ್ಪಸ್ವಾಮಿ ಭಕ್ತರಿಗೆ ಮನೆಯಲ್ಲಿ ಭೋಜನ ವ್ಯವಸ್ಥೆ ಮಾಡುತ್ತಿದ್ದೇನೆ. ಧರ್ಮ, ಜಾತಿ ಎಣಿಸದೇ ಮಾನವಕುಲಕ್ಕೆ ಒಳಿತನ್ನು ಬಯಸುವುದು ಶ್ರೇಷ್ಠ ಎಂಬುದು ನನ್ನ ನಂಬಿಕೆ’ ಎಂದು ಕರೀಂಸಾಬ್‌ ಹೇಳಿದರು.

ADVERTISEMENT

‘ಅಯ್ಯಪ್ಪ ಭಕ್ತರಿಗೆ ಯಾವುದೇ ಜಾತಿ, ಧರ್ಮದ ಭೇದ–ಭಾವ ಇಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ ಯಾವುದೇ ಧರ್ಮದವರ ಮನೆಯಲ್ಲಿ ಪೂಜೆ ಮಾಡಲು ಮತ್ತು ಪ್ರಸಾದ ಸ್ವೀಕರಿಸಲು ಅವಕಾಶವಿದೆ. ಭಕ್ತಿಯಿಂದ ಆಹ್ವಾನ ನೀಡಿದರೆ ನಾವು ತಿರಸ್ಕರಿಸುವುದಿಲ್ಲ’ ಎಂದು ಗುರುಸ್ವಾಮಿ ಚನ್ನಯ್ಯ ಹೇಳಿದರು.

‘ಅಯ್ಯಪ್ಪ ಮಾಲೆ ಧರಿಸಿದ ಭಕ್ತರಿಗೆ ಸ್ವಚ್ಛತೆ ಮತ್ತು ಮಡಿಯಿಂದ ಅಡುಗೆ ಮಾಡಿ ಬಡಿಸುವುದು ಮುಖ್ಯ. ಕೆಲವು ಮನೆಗಳಲ್ಲಿ ಅಡುಗೆ ಸಾಮಾನುಗಳನ್ನು ನಮಗೇ ನೀಡಿ ಅಡುಗೆ ತಯಾರಿಸಲು ಹೇಳುತ್ತಾರೆ. ಈ ಭಾಗದಲ್ಲಿ ಬಿ.ಎ.ಕರೀಂಸಾಬ್‌ ಅವರು ಮೂರು ವರ್ಷಗಳಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಯ್ಯಪ್ಪಸ್ವಾಮಿ ಭಕ್ತರಾದ ಯಮನಪ್ಪ ಯಾದವ, ಗಂಗಪ್ಪ ದಿನ್ನಿ, ತಾಯಣ್ಣ ಯಾದವ, ಪಂಪಾಪತಿ, ಸಂಜು, ವೆಂಕಟೇಶ, ಕೃಷ್ಣ, ವಿಜಯ ಸೇರಿದಂತೆ ಕವಿತಾಳ ಮತ್ತು ಪಾತಾಪುರ ಅಯ್ಯಪ್ಪ ಪೀಠದ ಸ್ವಾಮಿ ಭಕ್ತರು ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು.

ಕವಿತಾಳದ ಮುಸ್ಲಿಂ ಸಮಾಜದ ಮುಖಂಡ ಬಿ.ಎ.ಕರೀಂಸಾಬ್‌ ಶನಿವಾರ ತಮ್ಮ ಮನೆಯಲ್ಲಿ ಅಯ್ಯಪ್ಪ ಭಕ್ತರಿಗೆ ಊಟ ಬಡಿಸಿದರು
ಕವಿತಾಳದ ಮುಸ್ಲಿಂ ಸಮಾಜದ ಮುಖಂಡ ಬಿ.ಎ.ಕರೀಂಸಾಬ್‌ ಅವರ ಮನೆಯಲ್ಲಿ ಶನಿವಾರ ಪ್ರಸಾದ ಸ್ವೀಕರಿಸಿದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.