ADVERTISEMENT

ರಾಯಚೂರು | ಕೆಎಸ್‌ಆರ್‌ಪಿ ತುಕಡಿ ಸ್ಥಾಪನೆಗೆ ಸಿಗದ ಸಮ್ಮತಿ: ಸಿಬ್ಬಂದಿಗೆ ನಿರಾಸೆ

ಮಂಜುನಾಥ ಎನ್ ಬಳ್ಳಾರಿ
Published 2 ಡಿಸೆಂಬರ್ 2025, 23:30 IST
Last Updated 2 ಡಿಸೆಂಬರ್ 2025, 23:30 IST
<div class="paragraphs"><p>ಕೆಎಸ್‌ಆರ್‌ಪಿ ಮಹಿಳಾ ಸಿಬ್ಬಂದಿ</p></div>

ಕೆಎಸ್‌ಆರ್‌ಪಿ ಮಹಿಳಾ ಸಿಬ್ಬಂದಿ

   

(ಪ್ರಾತಿನಿಧಿಕ ಚಿತ್ರ)

ಕವಿತಾಳ (ರಾಯಚೂರು ಜಿಲ್ಲೆ): ರಾಯಚೂರು ಜಿಲ್ಲೆಯಲ್ಲಿ ಸ್ಥಾಪಿಸಲಿರುವ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆ (ಕೆಎಸ್‌ಆರ್‌ಪಿ) 13ನೇ ಬೆಟಾಲಿಯನ್‌ಗೆ ಹಣಕಾಸು ಇಲಾಖೆಯ ಅನುಮೋದನೆ ವಿಳಂಬವಾಗಿದೆ. ಯೋಜನೆ ಕೈತಪ್ಪುವ ಆತಂಕ ಎದುರಾಗಿದೆ. ಸ್ಥಳ ನಿಯುಕ್ತಿ ಹಾಗೂ ಬಡ್ತಿ ನಿರೀಕ್ಷೆಯಲ್ಲಿದ್ದ 400ಕ್ಕೂ ಅಧಿಕ ಸಿಬ್ಬಂದಿಗೆ ನಿರಾಸೆಯಾಗಿದೆ. 

ADVERTISEMENT

ಪ್ರಸ್ತುತ ರಾಜ್ಯದಲ್ಲಿ ಕೆಎಸ್‌ಆರ್‌ಪಿಯ 12 ಮತ್ತು ಐಆರ್‌ಬಿಯ 2 ತುಕಡಿಗಳಿವೆ. ಈ ಪೈಕಿ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿ ಒಂದು ಐಆರ್‌ಬಿ ಮತ್ತು ಕಲಬುರಗಿಯಲ್ಲಿ ಒಂದು ಕೆಎಸ್‌ಆರ್‌ಪಿ  ತುಕಡಿ ಇದೆ. ಐಆರ್‌ಬಿ ಪಡೆಯನ್ನು ಕೆಎಸ್‌ಆರ್‌ಪಿಯಿಂದ ಪ್ರತ್ಯೇಕಿಸಲು ಕರ್ನಾಟಕ ಆಡಳಿತ ನ್ಯಾಯಮಂಡಳಿ ಈಚೆಗೆ ಆದೇಶಿಸಿದೆ. ಐಆರ್‌ಬಿ ಘಟಕಗಳ ಪ್ರತ್ಯೇಕ ಸ್ಥಾಪನೆ ಹಿನ್ನೆಲೆಯಲ್ಲಿ ಉದ್ದೇಶಿತ 13ನೇ ಬಟಾಲಿಯನ್‌ ಸ್ಥಾಪನೆಯ ಅಗತ್ಯ ಸದ್ಯಕ್ಕೆ ಕಂಡು ಬರುತ್ತಿಲ್ಲ ಎಂದು ಆರ್ಥಿಕ ಇಲಾಖೆ ಪ್ರತಿಪಾದಿಸುತ್ತಿದೆ.

2008ರಲ್ಲಿ ಕೆಎಸ್‌ಆರ್‌ಪಿಗೆ ಆಯ್ಕೆಯಾಗಿದ್ದ ಕಲ್ಯಾಣ ಕರ್ನಾಟಕ ಭಾಗದ ಹಲವು ಸಿಬ್ಬಂದಿ ಹೈದರಾಬಾದ್‌ ಕರ್ನಾಟಕ (371ಜೆ) ಮೀಸಲು ಅಡಿ ಬಡ್ತಿ ಹಾಗೂ ವರ್ಗಾವಣೆ ಪಡೆದು ಪ್ರಸ್ತುತ ಐಆರ್‌ಬಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಎಟಿ ಆದೇಶದಂತೆ ಎರಡೂ ಪಡೆಗಳನ್ನು ಪ್ರತ್ಯೇಕಿಸಿ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಬೇಕಿದೆ.

ಕಲಬುರಗಿ ಬೆಟಾಲಿಯನ್‌ನ ಒಂದು ಮಹಿಳಾ ಪಡೆ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದರ ಪರಿಣಾಮ ಸ್ಥಳ ನಿಯುಕ್ತಿಗೆ ಕಾಯುತ್ತಿದ್ದ ಸಿಬ್ಬಂದಿಗೆ ಸಂಕಷ್ಟ ಎದುರಾಗಿದೆ. ಮುನಿರಾಬಾದ್‌ನ ಐಆರ್‌ಬಿ ಮತ್ತು ಕಲಬುರಗಿಯ ಕೆಎಸ್‌ಆರ್‌ಪಿ ಪಡೆಗಳಲ್ಲಿ ಪ್ರಸ್ತುತ ಹೆಚ್ಚುವರಿಯಾಗಿ ಸೇವೆ ಸಲ್ಲಿಸುತ್ತಿರುವ 400ಕ್ಕೂ ಹೆಚ್ಚಿನ ಸಿಬ್ಬಂದಿಗೆ ಸ್ಥಳ ನಿಯುಕ್ತಿಗೆ ಅನುಕೂಲ ಕಲ್ಪಿಸುತ್ತಿದ್ದ 13ನೇ ಬಟಾಲಿಯನ್ ಸ್ಥಾಪನೆ ವಿಳಂಬವಾದಲ್ಲಿ ಈ ಸಿಬ್ಬಂದಿ ಮೂಲ ಸ್ಥಾನದಲ್ಲೇ ಇರಬೇಕಾಗಿದೆ.  

ಕಲಬುರಗಿ ಪಡೆಯಲ್ಲಿ ಹುದ್ದೆಗಳು ಖಾಲಿ ಇಲ್ಲದ ಕಾರಣ ಮುನಿರಾಬಾದ್ ಪಡೆಯಲ್ಲಿ ಈಗಾಗಲೇ ಬಡ್ತಿ ಪಡೆದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸ್ಥಳ ನಿಯುಕ್ತಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಲಬುರಗಿ ಪಡೆಯಲ್ಲಿ ನಿವೃತ್ತಿಯಾಗುವ ಅಧಿಕಾರಿಗಳ ಸ್ಥಾನಕ್ಕೆ ಬಡ್ತಿ ಪಡೆದ ಅಧಿಕಾರಿಗಳನ್ನು ಆದ್ಯತೆ ಮೇರೆಗೆ ನಿಯೋಜಿಸಲಾಗುತ್ತಿದೆ. ಹೀಗಾಗಿ ಬಡ್ತಿ ಪಡೆದವರಿಗೆ ಸೂಕ್ತ ಸ್ಥಳಾವಕಾಶ ಸಿಗುತ್ತಿಲ್ಲ ಎಂದು ಸಿಬ್ಬಂದಿ ಮತ್ತು ಅಧಿಕಾರಿಗಳು ಹೇಳುತ್ತಾರೆ.

ಕಲ್ಯಾಣ ಕರ್ನಾಟಕ ಭಾಗದ ಅಧಿಕಾರಿಗಳು, ಸಿಬ್ಬಂದಿ ಇದೀಗ ಜಿಲ್ಲೆಯ ಸಚಿವರು, ಶಾಸಕರು,  ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸೇರಿ ಜನಪ್ರತಿನಿಧಿಗಳ ಮೂಲಕ ಉದ್ದೇಶಿತ 13ನೇ ಬೆಟಾಲಿಯನ್‌ ಸ್ಥಾಪಿಸಲು ನಡೆಸುತ್ತಿರುವ ಪ್ರಯತ್ನ ಫಲಕಾರಿಯಾಗಿಲ್ಲ.

‘13ನೇ ಬೆಟಾಲಿಯನ್‌ ಸ್ಥಾಪನೆಯನ್ನು ಪ್ರಸಕ್ತ ಸಾಲಿನಲ್ಲಿ ಪರಿಗಣಿಸಲು ಅವಕಾಶವಿಲ್ಲ’ ಎಂದು ಒಳಾಡಳಿತ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಎನ್. ವನಜಾ ಅವರು ಪೊಲೀಸ್‌ ಮಹಾನಿರ್ದೇಶಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ 13ನೇ ಬೆಟಾಲಿಯನ್‌ ಸ್ಥಾಪನೆ ಸಾಧ್ಯತೆ ಪ್ರಸ್ತಾವ ಹಣಕಾಸು ಇಲಾಖೆಯ ಪರಿಶೀಲನೆಯಲ್ಲಿದೆ
ಸಂದೀಪ್‌ ಪಾಟೀಲ, ಕೆಎಸ್‌ಆರ್‌ಪಿ ಐಜಿಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.