
ಕವಿತಾಳ: ಕೆಎಸ್ಆರ್ಪಿ 13ನೇ ತುಕಡಿ ಸ್ಥಾಪನೆಗೆ ಸಮೀಪದ ವಟಗಲ್ ಗ್ರಾಮದಲ್ಲಿ ಗುರುತಿಸಿದ ಜಾಗವನ್ನು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಡಿವೈಎಸ್ಪಿ ಪ್ರಭಾನಂದ ಗೋಡಖೆ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಮಲ್ಲಯ್ಯ ಮಂಗಳವಾರ ಪರಿಶೀಲಿಸಿದರು.
ರಾಯಚೂರು ಜಿಲ್ಲೆಯಲ್ಲಿ ಕೆಎಸ್ಆರ್ಪಿ 13ನೇ ತುಕಡಿ ಸ್ಥಾಪನೆ ಅಗತ್ಯವಿದ್ದು, ಹಣಕಾಸು ಇಲಾಖೆಗೆ ಮರು ಪ್ರಸ್ತಾವ ಸಲ್ಲಿಸುವಂತೆ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಡಿಜಿ, ಐಜಿಪಿ ಅವರು ಈಚೆಗೆ ಪತ್ರ ಬರೆದಿದ್ದರು.
‘ವಟಗಲ್ ಗ್ರಾಮದ ಹತ್ತಿರ ಸರ್ಕಾರಿ ಭೂಮಿ ಲಭ್ಯವಿದ್ದು, 13ನೇ ತುಕಡಿ ಸ್ಥಾಪನೆಗೆ ಅಗತ್ಯವಿರುವ ಜಮೀನು ನೀಡಲು ಅವಕಾಶವಿದೆ’ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದರು.
‘ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಮತ್ತು ಜಮೀನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.
ಕವಿತಾಳ ಠಾಣೆ ಪಿಎಸ್ಐ ಗುರುಚಂದ್ರ ಯಾದವ, ಮುಖಂಡರಾದ ಬಸವರಾಜ ಬುಂಕಲದೊಡ್ಡಿ ಮತ್ತು ಬಲವಂತರಾಯ ವಟಗಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.