ರಾಯಚೂರು: ನಗರಸಭೆ ವ್ಯಾಪ್ತಿಯ ರಾಂಪೂರು ಬಡಾವಣೆಯಲ್ಲಿ ಸತ್ತವರನ್ನು ಹೂಳಲು ಜಾಗದ ಕೊರತೆ ಎದುರಾಗಿದೆ. ನಿಗದಿತ ಪ್ರಮಾಣದಲ್ಲಿ ಸ್ಮಶಾನವಿಲ್ಲದ ಕಾರಣ ಅಂತ್ಯಸಂಸ್ಕಾರಕ್ಕೆ ಪರದಾಡುವ ಪರಿಸ್ಥಿತಿ ಇದೆ.
‘ರಾಂಪೂರದಲ್ಲಿ ಅಂದಾಜು 6 ಸಾವಿರ ಜನಸಂಖ್ಯೆ ಇದೆ. 800 ಕುಟುಂಬಗಳು ವಾಸವಾಗಿವೆ. ಶವ ಸಂಸ್ಕಾರ ಮಾಡಲು ಕೇವಲ 20 ಗುಂಟೆ ರುದ್ರಭೂಮಿ ಇದೆ. ಇದರಿಂದ ಹೂಳಿದ ಜಾಗದಲ್ಲಿ ಮತ್ತೊಂದು ಶವ ಹೂಳುವ ಪರಿಸ್ಥಿತಿ ಇದೆ’ ಎಂದು ನಿವಾಸಿಗಳು ಅಳಲು ತೋಡಿಕೊಂಡರು.
ಉಳ್ಳವರು ಖಾಸಗಿ ಜಮೀನುಗಳಲ್ಲಿ ಶವ ಸಂಸ್ಕಾರ ಮಾಡುತ್ತಾರೆ. ಬಡವರು ಹಾಗೂ ಪರಿಶಿಷ್ಟರಿಗೆ ಸ್ವಂತ ಜಮೀನಿಲ್ಲದ ಕಾರಣ ಶವ ಹೂಳಲು ಹೆಣಗಾಡಬೇಕು ಎಂದು ಗ್ರಾಮಸ್ಥರು ತಿಳಿಸಿದರು.
ಜಾಗದ ಕೊರತೆಯಿಂದ ಮೊದಲೇ ಇರುವ ಸಮಾಧಿಯನ್ನು ಮತ್ತೊಮ್ಮೆ ಅಗೆದು ಹೂಳಬೇಕಿದೆ. ಹೀಗೆ ಮಾಡುವಾಗ ಕೆಲವೊಮ್ಮೆ ಕೊಳೆತ ಶವಗಳು ಬರುತ್ತವೆ. ಅವುಗಳನ್ನು ಹೊರತೆಗೆದು, ಆ ಸ್ಥಳದಲ್ಲಿ ಶವ ಸಂಸ್ಕಾರ ಮಾಡುವ ಪರಿಸ್ಥಿತಿ ಇದೆ ಎನ್ನುತ್ತಾರೆ ಅವರು.
ಬಡಾವಣೆಗೆ ರುದ್ರಭೂಮಿ ಮಂಜೂರು ಮಾಡಬೇಕು ಎಂದು ಕಳೆದ ಮೂರು ವರ್ಷಗಳಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತ ಬಂದರೂ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಕೂಡಲೇ ಸ್ಮಶಾನಕ್ಕಾಗಿ 6 ಎಕರೆ ಜಮೀನು ಗುರುತಿಸಬೇಕು’ ಎಂದು ಗ್ರಾಮದ ಮುಖಂಡ ರವಿ ದಾದಸ್ ಒತ್ತಾಯಿಸಿದ್ದಾರೆ.
ಈ ಕುರಿತು ತಹಶಿಲ್ದಾರ್ ಹಂಪಣ್ಣ ಪ್ರತಿಕ್ರಿಯಿಸಿ,‘ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ರುದ್ರಭೂಮಿಯ ಕೊರತೆ ಇರುವ ಕುರಿತು ದೂರುಗಳು ಬಂದಿವೆ. ಹಲವು ಕಡೆ ಖಾಸಗಿ ಮಾಲೀಕರು ಜಾಗ ನೀಡುತ್ತಿಲ್ಲ. ಇದರಿಂದ ವಿಳಂಬವಾಗುತ್ತಿದೆ. ಸರ್ಕಾರಿ ಜಮೀನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.