ಲಿಂಗಸುಗೂರು: ಸಿಂಧನೂರು ಹಾಗೂ ಲಿಂಗಸುಗೂರಿನಲ್ಲಿ ವಾಸಿಸುವ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಫಲಾನುಭವಿಗಳಿಗೆ ನಿವೇಶನ ಹಂಚಿಕೆಯಲ್ಲಿ ಆಗುತ್ತಿರುವ ವಿಳಂಬ ಖಂಡಿಸಿ ದಲಿತ ಸಮರ ಸೇನೆ ನೇತೃತ್ವದಲ್ಲಿ ಫಲಾನುಭವಿಗಳು ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ವಿಶೇಷ ವರ್ಗದವರಿಗೆ ನಿವೇಶನ ಹಂಚಿಕೆಗೆ ಲಿಂಗಸುಗೂರು 183 ಹಾಗೂ ಸಿಂಧನೂರಿನಲ್ಲಿ 239 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 2022ರಿಂದ ಜಿಲ್ಲಾಧಿಕಾರಿ ನಿವೇಶನಗಳಿಗೆ ಭೂಮಿ ಗುರುತಿಸಿ ಪ್ರಸ್ತಾವ ಕಳಿಸಬೇಕು ಎಂದು ಉಪವಿಭಾಗಾಧಿಕಾರಿಗೆ ಎರಡು ಬಾರಿ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.
2023ರಲ್ಲಿ ಸಿಂಧನೂರು, ಮಾನ್ವಿ, ಲಿಂಗಸುಗೂರು, ಸಿರವಾರ ತಹಶೀಲ್ದಾರರಿಗೆ ಹಾಗೂ ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಭೂಮಿ ಗುರುತಿಸುವಂತೆ ಸೂಚನೆ ನೀಡಿದ್ದರೂ ಕೂಡ ಇಲ್ಲಿಯವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಕಚೇರಿಗೆ ಅಲೆದಾಡುವಂತಾಗಿದೆ ಎಂದು ದೂರಿದರು.
ಹತ್ತು ದಿನಗಳ ಹಿಂದೆ ಹೋರಾಟ ಮಾಡಿ ಅಂತಿಮ ಗಡುವು ನೀಡಲಾಗಿತ್ತು. ಭೂಮಿ ಕಾಯ್ದಿರಿಸಿ ಜಿಲ್ಲಾಧಿಕಾರಿಗೆ ಪ್ರಸ್ತಾವ ಕಳಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ತಿಳಿಸಿದ್ದಾರೆ. ಒಂದು ವೇಳೆ ಅದು ಕಾರ್ಯರೂಪಕ್ಕೆ ಬರದಿದ್ದರೆ ಎಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಸಂಘಟನೆಯ ವಿಭಾಗೀಯ ಸಂಚಾಲಕ ಅನಿಲ ನೀಲಕಂಠ ಎಚ್ಚರಿಸಿದ್ದಾರೆ.
ತಾಲ್ಲೂಕು ಘಟಕದ ಅಧ್ಯಕ್ಷ ಅಸ್ಮತ್, ಶೇಖ್ ಮಹಿಬೂಬು, ಫಯಾಜ್, ಮೇತರ ಬಾಬ, ಅಮರೇಶ ಪವಾರ, ಮೌಲಾಸಾಬ್, ಅಮೀನ್, ನಾಗರಾಜ, ಖಾಜಾ ಮುನ್ನಿ, ಅಸ್ಮಾ, ಜುಬೇದಾ, ಶೈಜಾಬಿ, ರಹಿಮತ್ ಬೇಗಂ, ಫೌಜಿಯಾ, ಬಾನು, ಆಯೇಷಾ, ಶಂಕರ, ಬಸವರಾಜ ಸ್ವಾಮಿ, ಬಾಲಾವಾಲ, ಶಾಂತಮ್ಮ, ಬಸವರಾಜ ರೆಡ್ಡಿ, ಮುರ್ತುಜಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.