ರಾಯಚೂರು: ತಾಲ್ಲೂಕಿನ ಡಿ.ರಾಂಪೂರ(ಡೊಂಗರಾಂಪೂರು) ಗ್ರಾಮದ ಪರಮೇಶ್ವರ ಬೆಟ್ಟದಲ್ಲಿ ವಾಸವಾಗಿರುವ ಗಂಡು ಚಿರತೆ ಬೆಟ್ಟದ ಮೇಲಿನ ನವಿಲುಗಳು, ನಾಯಿಗಳನ್ನು ತಿಂದು ಹಾಕಿದ್ದು, ಈಗ ಬೆಟ್ಟದ ಕೆಳಗೆ ಬಂದ ಚಿರತೆ ಬುಧವಾರ ರಾತ್ರಿ ಎರಡು ಕುರಿಗಳನ್ನು ಹೊತ್ತೊಯ್ದಿದೆ.
ಡೊಂಗರಾಂಪುರು ಗ್ರಾಮದ ಬೆಟ್ಟಕ್ಕೆ ಹೊಂದಿಕೊಂಡು ಗುಡಿಸಲು ಹಾಕಿ ವಾಸವಾಗಿರುವ ತಾಯಪ್ಪ ಎಂಬುವವರು ಹೊರಗೆ ಕಟ್ಟಿಹಾಕಿದ ಎರಡು ಕುರಿಗಳನ್ನು ಎತ್ತಿಕೊಂಡು ಹೋಗಿ ತಿಂದು ಹಾಕಿದೆ. ಇದರ ಹೆಜ್ಜೆ ಗುರುತುಗಳು, ಕುರುಹುಗಳು ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು ಅರಣ್ಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಅಸಮಾಧಾನ ಗೊಂಡಿದ್ದಾರೆ.
ಮೇ ತಿಂಗಳ ಆರಂಭದಲ್ಲಿ ಕಾಣಿಸಿಕೊಂಡು ಅರಣ್ಯ ಇಲಾಖೆ ಇಟ್ಟ ಬೋನ್ಗೆ ಬಿದ್ದಿಲ್ಲ. ಗ್ರಾಮದ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡುತ್ತಿದೆ.
ಅರಣ್ಯ ಇಲಾಖೆಯ ತಾಲ್ಲೂಕು ವಲಯ ಅಧಿಕಾರಿ ರಾಜೇಶ ನಾಯಕ ಮಾತನಾಡಿ, 2 ವರ್ಷದ ಗಂಡು ಚಿರತೆ ಸೆರೆಗೆ ಎರೆಡು ಕಡೆ ಬಲೆ ಬೀಸಲಾಗಿದೆ. ಬೋನ್ ಬಳಿಗೆ ಬಂದು ವಾಪಸ್ ಹೋಗಿದೆ. ಆಹಾರ ಹುಡುಕುತ್ತಾ ಬೆಟ್ಟದ ಕೆಳಗೆ ಬಂದಿರಬಹುದು ಅಲ್ಲಿ ಆಹಾರ ಸಿಗದೇ ಬೋನ್ಗೆ ಬೀಳಲಿದೆ. ಸಾರ್ವಜನಿಕರು ಆತಂಕ ಪಡಬಾರದು, ಬಳ್ಳಾರಿ ಪ್ರಾಣಿ ಸಂಗ್ರಹಾಲಯದಿಂದ ಹೆಣ್ಣು ಚಿರತೆಯ ಮೂತ್ರವನ್ನು ಬಲೆಯ ಬಳಿ ಚೆಲ್ಲಿದ್ದು ಅದರ ವಾಸನೆಗೆ ಬಂದು ಬೋನ್ಗೆ ಬೀಳಬಹುದು. ರಾತ್ರಿ ವೇಳೆ ಇಬ್ಬರು ಸಿಬ್ಬಂದಿ ನೇಮಿಸಲಾಗಿದ್ದು ಹಗಲಿನಲ್ಲಿ ನಾಲ್ಕು ಸಿಬ್ಬಂದಿ ಗ್ರಾಮದಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.