ಶಕ್ತಿನಗರ: ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರು ಬಿಜೆಪಿಯವರಿಂದ ಹಣ ಪಡೆದಿಲ್ಲ ಎಂದು ಆಣೆ ಮಾಡಿ ಸಾಬೀತುಪಡಿಸುವಂತೆ ಕಾಂಗ್ರೆಸ್ನ ಮತ್ತೊಬ್ಬ ಸ್ಪರ್ಧಾ ಆಕಾಂಕ್ಷಿ ಚಂದ್ರಶೇಖರ ನಾಯಕ ಇಡಪನೂರು ಸವಾಲು ಹಾಕಿದ್ದಾರೆ.
ಈಚೆಗೆ ಇಲ್ಲಿನ ಯಾಪಲದಿನ್ನಿ ಗ್ರಾಮದ ಹಜರತ ಜಂಗ್ಲಿಪೀರಸಾಬ ದರ್ಗಾವನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ ಕಮಲಕ್ಕೆ ಆಕರ್ಷಿತರಾಗಿ ಮುಂಬೈಗೆ ಹೋಗಿಲ್ಲವೆಂದು ಶಾಸಕ ದದ್ದಲ್ ಅವರು ದರ್ಗಾ ಮೇಲೆ ಸುಳ್ಳು ಪ್ರಮಾಣ ಮಾಡಿ, ಈ ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸಿದ್ದಾರೆ. ಹಾಗಾಗಿ ಈ ದಿನ ದರ್ಗಾ ಸ್ಥಳವನ್ನು ನೀರಿನಿಂದ ಶುದ್ಧಗೊಳಿಸಿ ಪೂಜೆ ಸಲ್ಲಿಸಲಾಯಿತು ಎಂದು ಹೇಳಿದರು.
ಶಾಸಕ ದದ್ದಲ್ ಅವರು ₹ 100 ಕೋಟಿ ಆಮಿಷಕ್ಕೆ ಒಳಗಾಗಿ ಮುಂಬೈ ಹೋಗಿದ್ದು ಸತ್ಯ. ಈ ಬಗ್ಗೆ ಹಜರತ ಜಂಗ್ಲಿ ಪೀರಸಾಬ ದರ್ಗಾಕ್ಕೆ ಬಂದು ಪ್ರಮಾಣ ಮಾಡಲಿ. ಯಾವುದು ಸತ್ಯ ಎಂಬುದಕ್ಕೆ ಪೂರಕ ದಾಖಲೆ ನೀಡುವುದಾಗಿಯೂ ತಿಳಿಸಿದರು.
ಮುಖಂಡರಾದ ಶಿವಶರಣಗೌಡ, ಚಕ್ರಪಾಣಿರೆಡ್ಡಿ ಬೂರ್ದಿಪಾಡ, ವೀರ ಪ್ರತಾಪರೆಡ್ಡಿ ಗುಂಜಳ್ಳಿ, ರಂಗಾರೆಡ್ಡಿ ಮಾಮಿಡದೊಡ್ಡಿ, ನವೀನ ರಾಂಪೂರ, ಕೃಷ್ಣಾ ಬಾಪೂರ, ತಿಮ್ಮಪ್ಪ ಬಾಪೂರ, ಸಿಂಗನೋಡಿ, ಸ್ವಾಮಿ ಸಿಂಗನೋಡಿ, ಈರಪ್ಪ ಮಂಡಲಗೇರಾ, ಮಲ್ಲೇಶ ಮಂಡಲಗೇರಾ, ತಾಯಪ್ಪ ಯಾಪಲದಿನ್ನಿ, ರಾಮಾಂಜಿನೇಯ ಮಾಲದೊಡ್ಡಿ, ರಾಮು ಮಲಿಯಾಬಾದ ಪಕ್ಷದ ಮುಖಂಡರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.