ಲಿಂಗಸುಗೂರು: ದೆಹಲಿ ತೀಸ್ ಹಜಾರಿ ನ್ಯಾಯಾಲಯದ ಆವರಣದಲ್ಲಿ ಪೊಲೀಸರು ವಕೀಲರ ಮೇಲೆ ನಡೆಸಿರುವ ಹಲ್ಲೆ ಖಂಡಿಸಿ ನ್ಯಾಯಾಲಯ ಕಲಾಪ ಬಹಿಷ್ಕರಿಸಿದ ವಕೀಲರ ಸಂಘದ ಸದಸ್ಯರು ರಾಷ್ಟ್ರವ್ಯಾಪಿ ವಕೀಲರಿಗೆ ಸೂಕ್ತ ಭದ್ರತೆ ನೀಡುವಂತೆ ಆಗ್ರಹಿಸಿದರು. ಉಪವಿಭಾಗಾಧಿಕಾರಿ ಡಾ. ದಿಲೀಶ್ ಸಸಿ ಅವರಿಗೆ ಮನವಿಪತ್ರ ಸಲ್ಲಿಸಿದರು.
ಸೋಮವಾರ ವಕೀಲರ ಸಂಘದಲ್ಲಿ ತುರ್ತು ಸಭೆ ನಡೆಸಿದ ಸದಸ್ಯರು ‘ಘಟನೆ ಕುರಿತಂತೆ ವಿಶೇಷ ಅಧಿಕಾರಿ ನಿಯೋಜಿಸಿ ಸೂಕ್ತ ತನಿಖೆ ನಡೆಸಬೇಕು. ಪದೇ ಪದೇ ನಡೆಯುತ್ತಿರುವ ಇಂಥ ಘಟನೆಗಳಿಗೆ ಕಡಿವಾಣ ಹಾಕಬೇಕು. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದರು.
ಭವಿಷ್ಯದಲ್ಲಿ ಇಂಥ ಘಟನೆಗಳು ಜರುಗದಂತೆ ಎಚ್ಚರವಹಿಸಬೇಕು. ವಕೀಲರಿಗೆ ಸೂಕ್ತ ರಕ್ಷಣೆ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ವಕೀಲರ ಸಂಘದ ಅಧ್ಯಕ್ಷ ಜಂಬಣ್ಣ ಮಂಚಾಲಿ, ಉಪಾಧ್ಯಕ್ಷ ಪ್ರಲ್ಹಾದಾಚಾರ ದಿಗ್ಗಾವಿ, ಕಾರ್ಯದರ್ಶಿ ಬಸವರಾಜ ಹೊಸೂರು, ಸದಸ್ಯರಾದ ನಂದೀಶ, ಡಿ.ಎಚ್. ಮುದಗಲ್ಲ, ಲಿಂಗಪ್ಪ ಹಟ್ಟಿ, ರಜನಿಕಾಂತ, ಸೂರ್ಯಚಂದ್ರ, ಬಸವರಾಜ ಆನ್ವರಿ, ನಬಿ ಶೇಡ್ಮಿ, ಮೊಸೀನ್ ಪಟೇಲ್, ಪೀರಸಾಬ ಕಿಡದೂರು, ಬಿ. ಬಸವರಾಜ ಅಬೀಬ ಶೇಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.