ADVERTISEMENT

ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಿಕೆ ನಾಳೆಯಿಂದ

ಪ್ರತಿದಿನ ಮಧ್ಯಾಹ್ನ 2 ಗಂಟೆವರೆಗೂ ಖರೀದಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 15:22 IST
Last Updated 12 ಜೂನ್ 2021, 15:22 IST
ಆರ್‌.ವೆಂಕಟೇಶಕುಮಾರ್‌
ಆರ್‌.ವೆಂಕಟೇಶಕುಮಾರ್‌   

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಕರಣ ಶೇ 3 ಕ್ಕಿಂತ ಕಡಿಮೆಯಾದ ಕಾರಣ ಕೆಲವೊಂದು ಸಡಿಲಿಕೆಗಳನ್ನು ನೀಡಲಾಗಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ2 ಗಂಟೆವರೆಗೂ ಅವಕಾಶ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಣ್ಣ ಕೈಗಾರಿಕೆಗಳು ಹಾಗೂ ವೈಟಿಪಿಎಸ್, ಆರ್‌ಟಿಪಿಎಸ್ ನಲ್ಲಿ ಶೇ 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿರುವುದುನ್ನು ಮುಂದುವರಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ವಾರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇ 5 ರಷ್ಟಿತ್ತು, ಇದೀಗ ಪಾಸಿಟಿವಿಟಿ ಪ್ರಮಾಣ ಶೇ 3ಕ್ಕೆ ಇಳಿದಿದೆ, ಆದ ಕಾರಣ ಜಿಲ್ಲೆಯಲ್ಲಿ ಕೆಲವೊಂದು ಅಗತ್ಯ ಚಟುವಟಿಕೆಗಳನ್ನು ನಿರ್ವಹಿಸಲು ಮಾತ್ರ ಅವಕಾಶ ಕಲ್ಪಿಸಿದ್ದು, ಉಳಿದ ಚಟುವಟಿಕೆಗಳಿಗೆ ಈ ಹಿಂದಿನಂತೆಯೇ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದರು.

ಜೂನ್‌ 14 ರಿಂದ ಶುಕ್ರವಾರದವರೆಗೆ ಕಾರ್ಖಾನೆಗಳು, ಉತ್ಪಾದಕ ರಂಗಗಳು ವೈಟಿಪಿಎಸ್, ಆರ್‌ಟಿಪಿಎಸ್, ಜಿಲ್ಲೆಯಲ್ಲಿರುವ ಔಷಧ ಕಾರ್ಖಾನೆಗಳು ಶೇ 50 ರಷ್ಟು ಕಾರ್ಮಿಕರನ್ನು ಬಳಸಿಕೊಂಡು ದೈನಂದಿನ ಕೆಲಸ ಕಾರ್ಯನಿರ್ವಹಿಸಬಹುದು, ಪ್ರತಿದಿನ ಬೆಳಿಗ್ಗೆ 6 ರಿಂದ 2 ಗಂಟೆಯವರೆಗೆ ಅಗತ್ಯ ವಸ್ತುಗಳಾದ ಕಿರಾಣಿ ವಸ್ತುಗಳು, ನೀರು, ಹಾಲು, ಮಾಂಸ, ಹಣ್ಣು ಮಾರಾಟಕ್ಕೆ ಅವಕಾಶವಿದೆ, ಬ್ಯಾಂಕುಗಳು ಬೆಳಗ್ಗೆ 6 ರಿಂದ 2 ರವರೆಗೆ ತೆಗೆಯಲು ಅವಕಾಶ ನೀಡಿದೆ. ಬಾರ್, ರೆಸ್ಟೋರೆಂಟ್‌ಗಳು ಅವಕಾಶ ನೀಡಿಲ್ಲ, ಆದರೆ ಅಲ್ಲಿ ಕೌಂಟರ್‌ಗಳ ಮೂಲಕ ಪಾರ್ಸಲ್‌ಗೆ ಅವಕಾಶ ಕಲ್ಪಿಸಲಾಗಿದೆ, ಅದರಂತೆ ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಅಂಗಡಿ, ಸ್ಟೀಲ್, ಸಿಮೆಂಟ್ ಅಂಗಡಿ, ತೆರೆಯಲು 6 ರಿಂದ 2 ರವರೆಗೆ ಅವಕಾಶ ನೀಡಲಾಗಿದೆ, ಉಳಿದಂತೆ ಇತರೆ ಯಾವುದೇ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ, ಆಟೋ ಮತ್ತು ಟ್ಯಾಕ್ಸಿಗೆ ಸಡಿಲಿಕೆ ನೀಡಿದ್ದು ಇಬ್ಬರು ಪ್ರಯಾಣಿಕರೊಂದಿಗೆ ಅವುಗಳು ಸಂಚರಿಸಬಹುದಾಗಿದೆ ಎಂದು ಹೇಳಿದರು.

ಅಂಚೆ ಕಚೇರಿ ಬೆಳಿಗ್ಗೆ 6 ರಿಂದ 2 ರವರೆಗೆ ಕಾರ್ಯನಿರ್ವಹಿಸಬಹುದಾಗಿದೆ, ವಾರಾಂತ್ಯದ ಕರ್ಫ್ಯೂನಲ್ಲಿ ಜನ ಸಂಚಾರಕ್ಕೆ ಅವಕಾಶವಿಲ್ಲ, ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆಮನೆಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ, ಇದಕ್ಕೆ ಜನಪ್ರತಿನಿಧಿಗಳು ಸಹಕರಿಸಬೇಕು ಎಂದರು.

ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಅಂತರರಾಜ್ಯ ಸಂಚಾರಕ್ಕೆ ಪರವಾನಗಿ ಪಡೆಯಬೇಕಿರುತ್ತದೆ, ಹೊರಗಿನಿಂದ ಇಲ್ಲಿಗೆ ಬಂದರೆ, 7 ದಿನಗಳವರೆಗೆ ಹೊಂ ಕ್ವಾರೆಂಟನ್‌ನಲ್ಲಿರಬೇಕು, ಬ್ಲಾಕ್ ಫಂಗಸ್ ರೋಗಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 35 ಪ್ರಕರಣಗಳಲ್ಲಿ ಶಸ್ತ್ರ ಚಿಕಿತ್ಸೆಯಾಗಿದ್ದು, ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಹೇಳಿದರು.

ಪ್ರಮುಖವಾಗಿ ರೈತರು ಬೆಳೆದ ಬೆಳೆಗಳಿಗೆ ಅನುಕೂಲತೆ ಕಲ್ಪಿಸಲು ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಎಪಿಎಂಸಿಯಲ್ಲಿ ವಹಿವಾಟು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.