ದೇವದುರ್ಗ: ತಾಲ್ಲೂಕಿನ ಹೋನ್ನಟಗಿ ಗ್ರಾಮದಿಂದ ಮದರಕಲ್ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನಗಳು ಸಂಚರಿಸಲು ತೊಂದರೆಯಾಗುತ್ತಿದೆ. ಶಾಲಾ ಮಕ್ಕಳು, ಸಾರ್ವಜನಿಕರು ಸಂಚರಿಸಲು ಪರದಾಡುವಂತಾಗಿದೆ.
ಮದರಕಲ್, ಖಾನಾಪುರ, ಹೋನ್ನಟಗಿ, ಗೂಗಲ್ ಮತ್ತು ರಾಯಚೂರು ಬಸ್ ಓಡಾಡುವ ಈ ರಸ್ತೆ ಹೋಬಳಿ ಕೇಂದ್ರ ಗಬ್ಬೂರಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರತಿದಿನ ನೂರಾರು ವಾಹನಗಳು, ಸಾವಿರಾರು ಜನರು ಓಡಾಡುತ್ತಾರೆ.
ದ್ವಿಚಕ್ರ ವಾಹನ ಸವಾರರು ಹೊಂಡ, ಗುಂಡಿಗಳನ್ನು ತಪ್ಪಿಸಿಕೊಂಡು ಮುಂದೆ ಹೋಗಲು ಹರಸಾಹಸ ಪಡಬೇಕು. ಸುಮಾರು ಐದಾರು ಕಿ.ಮೀ. ಇರುವ ಈ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಮಳೆ ನೀರು ನಿಂತಿದೆ. ಇಂತಹ ಪರಿಸ್ಥಿತಿಯಲ್ಲಿಯೇ ಜನ ಮತ್ತು ವಾಹನಗಳು ಅನಿವಾರ್ಯವಾಗಿ ಸಂಚರಿಸುವಂತಾಗಿದೆ. ಜನಸಾಮಾನ್ಯರು ಓಡಾಡುವ ಸಂದರ್ಭ, ಪಕ್ಕದಲ್ಲಿ ವಾಹನಗಳು ಹಾಯ್ದು ಹೋದರೆ ಕೆಸರು ನೀರು ಮೈಮೇಲೆ ಸಿಡಿಯುತ್ತದೆ.
ಹೋನ್ನಟಗಿ, ಮದರಕಲ್ ಮಾರ್ಗ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಜನಸಾಮಾನ್ಯರು ಓಡಾಡಲು ದುಸ್ತರವಾಗಿದೆ. ಹಲವು ವರ್ಷಗಳಿಂದ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯಾಭ್ಯಾಸಕ್ಕೆಂದು ಹೋಬಳಿ ಕೇಂದ್ರಕ್ಕೆ ಅತಿ ಹೆಚ್ಚು ವಿದ್ಯಾರ್ಥಿಗಳು ಓಡಾಡುತ್ತಾರೆ. ಆದರೆ, ರಸ್ತೆ ಹದಗೆಟ್ಟ ಹಿನ್ನೆಲೆ ಪ್ರತಿ ನಿತ್ಯ ಬಸ್ ತಡವಾಗಿ ತಲುಪುತ್ತವೆ.
‘ತಾಲ್ಲೂಕಿನಲ್ಲಿ ಅಕ್ರಮ ಮರಳು ದಂಧೆಯಿಂದ ಓವರ್ ಲೋಡ್ ಹೊತ್ತ ಟಿಪ್ಪರ್ಗಳು ಹಗಲಿರುಳು ಸಂಚರಿಸುತ್ತಿವೆ. ಮಣಬಾರವನ್ನು ಹೊತ್ತು ಸಾಗುವ ಟಿಪ್ಪರ್ಗಳ ಸಂಚಾರದಿಂದ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಮದರಕಲ್ ಗ್ರಾಮದ ಹತ್ತಿರ ರಸ್ತೆಯಲ್ಲಂತೂ ಬೃಹತ್ ಗುಂಡಿಗಳು ಬಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಸಾರ್ವಜನಿಕರು ದೂರುತ್ತಾರೆ.
ಹೋನ್ನಟಗಿ- ಮದರಕಲ್ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವ ಬಗ್ಗೆ ಮಾಹಿತಿ ಇದೆ. ಅನುದಾನ ಮಂಜೂರಾಗಿದೆ. ಅಡಿಗಲ್ಲು ನೆರವೇರಿಸಿ ಕಾಮಗಾರಿ ಪ್ರಾರಂಭಿಸಲಾಗುವುದುಬನ್ನಪ್ಪ ಲೋಕೋಪಯೋಗಿ ಇಲಾಖೆ ಎಇಇ ದೇವದುರ್ಗ
ಅನುದಾನ ಮಂಜೂರಾಗಿ ವರ್ಷ ಕಳೆದಿದೆ. ಮಾಜಿ ಶಾಸಕರ ಅವಧಿಯಲ್ಲಿ ಅಡಿಗಲ್ಲು ಆಗಿದೆ. ನೆಪ ಹೇಳುವ ಬದಲು ಕಾಮಗಾರಿ ಆರಂಭಿಸಬೇಕುಶಾಂತಕುಮಾರ ಹೋನ್ನಟಗಿ ದಲಿತಪರ ಸಂಘಟನೆ ಮುಖಂಡ
ಚುನಾವಣೆ ಸಂದರ್ಭದಲ್ಲಿ ಮಾತ್ರ ಊರಿಗೆ ಬರುವ ಜನಪ್ರತಿನಿಧಿಗಳು ನಂತರ ಈ ಕಡೆ ತಲೆ ಹಾಕುವುದೇ ಇಲ್ಲ. ರಸ್ತೆ ಪೂರ್ಣ ಹಾಳಾಗಿದ್ದರೂ ದುರಸ್ತಿ ಮಾಡಿಸುವವರಿಲ್ಲಮಾರೆಪ್ಪ ಮದರಕಲ್ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.