ರಾಯಚೂರು: ಗುರು ರಾಯರ ವಾರ ಗುರುವಾರವೇ ವರ್ಷದ ಮೊದಲ ದಿನ ಬಂದ ಪ್ರಯುಕ್ತ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಮಠದ ಆವರಣ ಸಾವಿರಾರು ಸಂಖ್ಯೆಯ ಭಕ್ತರಿಂದ ತುಂಬಿಕೊಂಡಿದೆ.
ಬೆಳಗಿನ ಜಾವ ಐದು ಗಂಟೆಯಿಂದಲೇ ರಾಯರ ವೃಂದಾವನ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಮಠದೊಳಗೆ ಬರಲು ಎಲ್ಲ ದ್ವಾರಗಳ ಮೂಲಕ ಅವಕಾಶ ಕಲ್ಪಿಸಲಾಗಿತ್ತು.
ಬಹುತೇಕ ಭಕ್ತರು ಕುಟುಂಬದ ಸದಸ್ಯರೊಂದಿಗೆ ಮಂತ್ರಾಲಯಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ರಾಯರ ದರ್ಶನ ಪಡೆದರು. ಹೊಸ ವರ್ಷ ಶುಭವನ್ನೇ ತರಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಬೆಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ದಾವಣಗೆರೆಯಿಂದ ಬಂದಿದ್ದ ಭಕ್ತರಿಗೆ ಮಠದ ಕೊಠಡಿ ಲಭ್ಯವಾಗದೇ ತೊಂದರೆ ಅನುಭವಿಸಿದರು. ಕಿಕ್ಕಿರಿದ ಭಕ್ತರಿಂದಾಗಿ ಪ್ರಸಾದ ವಿತರಣೆ ವ್ಯವಸ್ಥೆಯಲ್ಲಿ ವ್ಯತ್ಯಯವಾಯಿತು.
ಭಕ್ತರು ರಾಯರ ದರ್ಶನ ಪಡೆದ ನಂತರ ಮ್ಯೂಸಿಯ ವೀಕ್ಷಣೆ ಮಾಡಿದರು. ಅನೇಕರು ಮಠದ ಆವರಣದಲ್ಲಿ ಕುಳಿತು ಉಪಾಹಾರ ಸೇವಿಸಿದರು. ಸೆಲ್ಫಿ ಹಾಗೂ ಫೋಟೊಗಳನ್ನು ಕ್ಲಿಕ್ಕಿಸಿಕೊಂಡರು. ತುಂಗಭದ್ರಾ ನದಿ ತಟದಲ್ಲೂ ಜನ ಜಂಗಳಿ ಇತ್ತು.
ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಗಳು ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿಕೊಂಡಿದ್ದವು. ಅನೇಕ ಭಕ್ತರು ತಮ್ಮ ಊರುಗಳಿಂದ ಖಾಸಗಿ ವಾಹನಗಳಲ್ಲಿ ಮಂತ್ರಾಲಯಕ್ಕೆ ಬಂದು ರಾಯರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.