ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಯವರ 351 ನೇ ಆರಾಧನಾ ಮಹೋತ್ಸವದ ಕೊನೆಯ ದಿನ ಭಾನುವಾರ ಮಹಾರಥೋತ್ಸವವು ಅದ್ಧೂರಿಯಾಗಿ ಜರುಗಿತು.
ದೇಶದ ವಿವಿಧೆಡೆಯಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಮುಖ್ಯವಾಗಿ ಮಂತ್ರಾಲಯ ಪಕ್ಕದ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಗಡಿಗ್ರಾಮಗಳಿಂದ ಜನರು ಕುಟುಂಬಸಮೇತ ರಥೋತ್ಸವದಲ್ಲಿ ಭಾಗವಹಿಸಿದ್ದರು.
ಕಾಯಿ, ಕರ್ಪೂರ, ಹೂವು ಸಮರ್ಪಣೆ ಮಾಡಿ ರಾಯರಿಗೆ ನಮಿಸಿದರು. ಪ್ರಹ್ಲಾದ ಮಹಾರಾಜ ಅವತಾರದಲ್ಲಿ ರಾಯರು ರಥಾರೂಢರಾಗಿದ್ದರು. ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ರಥದ ಮೂಲಕ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.
ಮಂಡ್ಯ, ಮೈಸೂರು ಭಾಗದ ಪೂಜಾ ಕುಣಿತ, ಡೊಳ್ಳು ಕುಣಿತ ಹಾಗೂ ಪಟ ಕುಣಿತ ತಂಡಗಳು ಭಾಗವಹಿಸಿದ್ದವು. ವಾಧ್ಯವೈಭವ ವಿಶೇಷವಾಗಿತ್ತು. ಭಕ್ತರು ರಾಯರಿಗೆ ಘೋಷಣೆಗಳನ್ನು ಕೂಗಿದರು.
ಮಠದ ಮುಖ್ಯಬೀದಿಯಿಂದ ಶ್ರೀರಾಘವೇಂದ್ರ ವೃತ್ತದವರೆಗೂ ರಥವು ಸಂಚರಿಸಿ, ಮತ್ತೆ ಮಠದತ್ತ ಸಾಗಿತು.
ಶ್ರೀಗಳು ಹೆಲಿಕಾಪ್ಟರ್ ಮೂಲಕ ರಥೋತ್ಸವದ ಮೇಲರ ಪುಷ್ಪವೃಷ್ಟಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.