ಮಾನ್ವಿ: ಪಟ್ಟಣದ ವಿವಿಧ ಡಾಬಾಗಳಿಗೆ ಆಹಾರ ಸುರಕ್ಷತಾ ಅಧಿಕಾರಿಗಳು ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ರವರ ನೇತೃತ್ವದಲ್ಲಿ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ತಹಶೀಲ್ದಾರ್ ಭೀಮರಾಯ ರಾಮಸಮುದ್ರ ಮಾತನಾಡಿ, ‘ಡಾಬಾ ಮಾಲೀಕರು ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಸಿ ಆಹಾರ ತಯಾರಿಸಬೇಕು, ಆಡುಗೆ ಕೋಣೆಯಲ್ಲಿ ಸ್ವಚ್ಚತೆ ಕೈಗೊಳ್ಳಬೇಕು. ಅಗತ್ಯ ಸುರಕ್ಷತಾ ವಸ್ತ್ರಗಳನ್ನು ಧರಿಸಿ ಆಹಾರ ತಯಾರು ಮಾಡಬೇಕು. ಗ್ರಾಹಕರ ಆರೋಗ್ಯದ ಕಡೆ ಹೆಚ್ಚು ಅದ್ಯತೆಯನ್ನು ನೀಡಬೇಕು’ ಎಂದು ಸೂಚನೆ ನೀಡಿದರು.
ಆಹಾರ ಸುರಾಕ್ಷತಾ ಅಧಿಕಾರಿ ಬನದೇಶ್ವರ ಮಾತನಾಡಿ, ‘ಎಲ್ಲಾ ಡಾಬಾ ಮಾಲೀಕರು ಕಡ್ಡಾಯವಾಗಿ ಆಹಾರ ಸುರಕ್ಷತಾ ಪರವಾನಿಗೆ ಪ್ರಮಾಣಪತ್ರ ಪಡೆದು ನಿಯಮಗಳನ್ನು ಕಟ್ಟುನಿಟ್ಟಗಿ ಪಾಲಿಸಬೇಕು’ ಎಂದರು.
ಎರಡು ಡಾಬಾಗಳ ವಿರುದ್ಧ ಕ್ರಮ: ನಿಯಮಗಳನ್ನು ಪಾಲಿಸದೆ ಇರುವ ಎರಡು ಡಾಬಗಳ ಮೇಲೆ ಕ್ರಮ ಕೈಗೊಂಡು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಯಿತು. ಡಾಬಾಗಳ ಮಾಲೀಕರು 4 ತಿಂಗಳಿಂದ ಅನೇಕ ಬಾರಿ ನೋಟಿಸ್ ನೀಡಿದರು ಕೂಡ ವಿಚಾರಣೆಗೆ ಹಾಜರಾಗಿಲ್ಲ. ಅಪರ ಜಿಲ್ಲಾಧಿಕಾರಿ ಸೂಚನೆಯಂತೆ ಗುರುವಾರ ಡಾನ್ ಡಾಬಾ ಹಾಗೂ ಭಾರತ ಡಾಬಾ ಗಳಿಗೆ ಬೀಗಮುದ್ರೆ ಹಾಕಲಾಗಿದೆ ಎಂದು ಆಹಾರ ಸುರಕ್ಷತಾ ಅಧಿಕಾರಿ ಬನದೇಶ್ವರ ತಿಳಿಸಿದರು.
ಆಹಾರ ಸುರಕ್ಷತಾ ಅಧಿಕಾರಿ ಶರಣಬಸಪ್ಪ ಹೊಸಮನಿ, ಪುರಸಭೆ ಅಹಾರ ನಿರೀಕ್ಷಕ ಮಹೇಶಕುಮಾರ, ಆಹಾರ ನಿರೀಕ್ಷಕ ದೇವರಾಜ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.