ಹಟ್ಟಿ ಚಿನ್ನದ ಗಣಿ: ಪಟ್ಟಣದ ಹಟ್ಟಿ ಚಿನ್ನದ ಗಣಿಯ ಅಥಿತಿಗೃಹವನ್ನು ಮೈಸೂರು ಮಿನರಲ್ ಸಂಸ್ಥೆಯ ಅಧ್ಯಕ್ಷ ಲಿಂಗರಾಜು ಹಾಗೂ ಚಿನ್ನದ ಗಣಿಯ ನಾಮನಿರ್ದೇಶಕ ಶ್ರೀನಿವಾಸ ದೇಸಾಯಿ ಅವರು ನೀತಿಸಂಹಿತೆ ಇದ್ದರು ಸಹ ಅನಧಿಕೃತವಾಗಿ ವಾಸ್ತವ್ಯ ಹೂಡಿದ್ದಾರೆ ಎಂದು ಲಿಂಗಸಗೂರು ಶಾಸಕ ಡಿ.ಎಸ್.ಹುಲಗೇರಿ ಆರೋಪಿಸಿದರು.
ಸಮೀಪದ ಮಸ್ಕಿ ವಿಧಾನಸಭ ಉಪಚುನಾವಣೆ ಇದೆ. ರಾಜ್ಯದ ಗಣ್ಯವ್ಯಕ್ತಿಗಳು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು ಅದರಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯು ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದೆ. ಮಸ್ಕಿ ಕ್ಷೇತ್ರಕ್ಕೆ ಭೇಟಿ ನೀಡಿ ಚಿನ್ನದ ಗಣಿ ಸಂಸ್ಥೆಯ ಅಥಿತಿಗೃಹಕ್ಕೆ ವಾಸ್ತವ್ಯ ಮಾಡುವುದು ನೀತಿಸಂಹಿತೆ ಉಲ್ಲಂಘನೆ ಆಗುತ್ತಿದೆ. ಅಧಿಕಾರಿಗಳು ಇವರುಗಳ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಹಟ್ಟಿ ಗಣಿಯು ಸರ್ಕಾರದ ಉದ್ದಿಮೆ ಆಗಿದ್ದು ಚಿನ್ನದ ಗಣಿ ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೆ ನೀತಿಸಂಹಿತೆಯನ್ನು ಪಾಲಿಸಬೇಕು ಎಂದರು.
ಲಿಂಗಸುಗೂರು ಉಪವಿಭಾಗಾಧಿಕಾರಿ ರಾಜಶೇಖರ ಡಂಬಳ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಚುನಾವಣೆ ನಿಮಿತ್ತ ನೀತಿಸಂಹಿತೆ ಜಾರಿಯಲ್ಲಿ ಇರುವುದರಿಂದ ಹಟ್ಟಿ ಚಿನ್ನದ ಗಣಿಯ ಅತಿಥಿಗೃಹವನ್ನು ಬಳಕೆ ಮಾಡುವುದೋ ಇಲ್ಲವೋ ನನಗೆ ಮಾಹಿತಿ ಇರುವುದಿಲ್ಲ. ಚಿನ್ನದ ಗಣಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಮುಂದಿನ ಕ್ರಮಕೈಗೊಳ್ಳಲಾಗುತ್ತೇವೆ’ ಎಂದರು.
ಹಟ್ಟಿ ಚಿನ್ನದ ಗಣಿ ಕಂಪೆನಿಯಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್ ಬಹಾದ್ದೂರ ಮಾತನಾಡಿ, ‘ನೀತಿಸಂಹಿತೆ ಜಾರಿಯಲ್ಲಿ ಇರುವುದರಿಂದ ಚಿನ್ನದ ಗಣಿಯ ಅತಿಥಿಗೃಹ ದುರ್ಬಳಕೆಯ ಬಗ್ಗೆ ಲಿಂಗಸುಗೂರಿನ ಉಪವಿಭಾಗಾಧಿಕಾರಿ ಜೊತೆಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.