ADVERTISEMENT

ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲಗೆ ಪಾಠ ಕಲಿಸಿ: ಸತೀಶ್ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 5:33 IST
Last Updated 16 ಏಪ್ರಿಲ್ 2021, 5:33 IST
ಸಿಂಧನೂರು ತಾಲ್ಲೂಕಿನ ಗುಂಡಾ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದಿಂದ ಗುರುವಾರ ನಡೆದ ಪ್ರಚಾರ ಸಭೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸಚಿವ ಸತೀಶ್ ಜಾರಕಿಹೊಳೆ ಉದ್ಘಾಟಿಸಿದರು. ಮುಖಂಡರು ಇದ್ದರು
ಸಿಂಧನೂರು ತಾಲ್ಲೂಕಿನ ಗುಂಡಾ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದಿಂದ ಗುರುವಾರ ನಡೆದ ಪ್ರಚಾರ ಸಭೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸಚಿವ ಸತೀಶ್ ಜಾರಕಿಹೊಳೆ ಉದ್ಘಾಟಿಸಿದರು. ಮುಖಂಡರು ಇದ್ದರು   

ಸಿಂಧನೂರು: ‘ಕ್ಷೇತ್ರದ ಜನತೆಗೆ ದ್ರೋಹ ಬಗೆದಿರುವ ಪಕ್ಷಾಂತರಿ ಪ್ರತಾಪಗೌಡ ಪಾಟೀಲ ಅವರಿಗೆ ಮತದಾರರು ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು‘ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಗುಂಡಾ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದಿಂದ ಗುರುವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಳೆದ ಏಳು ವರ್ಷಗಳಿಂದ ಆಡಳಿತ ನಡೆಸುತಿದ್ದು, ಇದುವರೆಗೂ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ. ಯುವಕರಿಗೆ ಉದ್ಯೋಗ ಸೃಷ್ಠಿ ಮಾಡಿಲ್ಲ. ಅಡುಗೆ ಅನಿಲ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ದುಪ್ಪಟ್ಟಾಗಿದ್ದು, ಸಾಮಾನ್ಯ ನಾಗರಿಕರು ತಮ್ಮ ವಾಹನಗಳನ್ನು ಮಾರುವ ಸ್ಥಿತಿ ತಲುಪಿದ್ದಾರೆ. ದಿನನಿತ್ಯದ ಅಗತ್ಯ ವಸ್ತುಗಳು ಏರುತ್ತಲೇ ಇವೆ. ಆದರೆ ರೈತ ಬೆಳೆದ ಬೆಳೆಗಳಿಗೆ ಮಾತ್ರ ಬೆಲೆ ಸಿಗುತ್ತಿಲ್ಲ. ದುಡಿಯುವ ವರ್ಗ ಕೆಲಸವಿಲ್ಲದೇ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಗಮನ ಹರಿಸದೆ ಬಿಜೆಪಿ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಏಜೆಂಟ್‍ರಂತೆ ಕಾರ್ಯನಿರ್ವಹಿಸುತ್ತಿದೆ‘ ಎಂದು ಟೀಕಿಸಿದರು.

ಮಸ್ಕಿ ಕ್ಷೇತ್ರದಾದ್ಯಂತ ಬಿಜೆಪಿ ಅಕ್ರಮ ಹಣವನ್ನು ಹಂಚಿ ಅನೇಕ ಕಡೆ ಸಿಕ್ಕಿಕೊಂಡಿರುವ ಪ್ರಕರಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈಗಾಗಲೇ ಐದು ಎಫ್‍ಐಆರ್‌ಗಳು ಬಿಜೆಪಿ ಕಾರ್ಯಕರ್ತರ ವಿರುದ್ಧ ದಾಖಲಾಗಿವೆ. ಕಾಂಗ್ರೆಸ್ ಪಕ್ಷ ಚುನಾವಣೆ ನೀತಿ ಸಂಹಿತೆಯನ್ನು ಇದುವರೆಗೂ ಚಾಚುತಪ್ಪದೇ ಪಾಲಿಸಿದೆ. ಒಂದೇ ಒಂದು ಪ್ರಕರಣ ಕಾಂಗ್ರೆಸ್ ಪಕ್ಷದ ವಿರುದ್ಧ ದಾಖಲಾಗಿಲ್ಲ. ಕಾಂಗ್ರೆಸ್ ನೀತಿ ಪರವಾಗಿಯೇ ಚುನಾವಣೆಯನ್ನು ಮಾಡುತ್ತಿದೆ ಎಂದು ಹೇಳಿದರು.

ADVERTISEMENT

ಶಾಸಕ ಅಮರೇಗೌಡ ಬಯ್ಯಾಪುರ, ಶಾಸಕ ರಾಘವೇಂದ್ರ ಹಿಟ್ನಾಳ್, ಬಿ.ವಿ.ನಾಯಕ, ಹಂಪನಗೌಡ ಬಾದರ್ಲಿ, ಶರಣಪ್ಪ ಮಟ್ಟೂರು, ಬಸನಗೌಡ ಬಾದರ್ಲಿ, ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಇದ್ದರು. ನಿರುಪಾದೆಪ್ಪ ಗುಡಿಹಾಳ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.