ADVERTISEMENT

ಸಿಂಧನೂರಿನಲ್ಲಿ ಡಿ.26ಕ್ಕೆ 501 ಸಾಮೂಹಿಕ ವಿವಾಹ

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾಹಿತಿ: ನೋಂದಣಿ ಮಾಡಿಕೊಳ್ಳಲು ಮನವಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 7:13 IST
Last Updated 2 ನವೆಂಬರ್ 2021, 7:13 IST
ಸಿಂಧನೂರಿನ ಸುಕಾಲಪೇಟೆ ರಸ್ತೆಯಲ್ಲಿರುವ ಕುರುಬರ ಸಂಘದ ತಾಲ್ಲೂಕು ಘಟಕದ ಕಚೇರಿಯಲ್ಲಿ ಸೋಮವಾರ ಸಾಮೂಹಿಕ ವಿವಾಹ ಮಹೋತ್ಸವದ ಕರಪತ್ರವನ್ನು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹಾಗೂ ಮಾದಯ್ಯ ಗುರುವಿನ್ ಬಿಡುಗಡೆಗೊಳಿಸಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿದರು
ಸಿಂಧನೂರಿನ ಸುಕಾಲಪೇಟೆ ರಸ್ತೆಯಲ್ಲಿರುವ ಕುರುಬರ ಸಂಘದ ತಾಲ್ಲೂಕು ಘಟಕದ ಕಚೇರಿಯಲ್ಲಿ ಸೋಮವಾರ ಸಾಮೂಹಿಕ ವಿವಾಹ ಮಹೋತ್ಸವದ ಕರಪತ್ರವನ್ನು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹಾಗೂ ಮಾದಯ್ಯ ಗುರುವಿನ್ ಬಿಡುಗಡೆಗೊಳಿಸಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿದರು   

ಸಿಂಧನೂರು: ‘ದಾಸಶ್ರೇಷ್ಠ ಕನಕದಾಸ ಜಯಂತಿ ಅಂಗವಾಗಿ ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲ್ಲೂಕು ಘಟಕದ ವತಿಯಿಂದ ಡಿ.26 ರಂದು ಸಿಂಧನೂರಿನಲ್ಲಿ 501 ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ’ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ತಿಳಿಸಿದರು.

ನ.22 ರಂದು ಕನಕದಾಸರ ಜಯಂತ್ಯುತ್ಸವದ ಕಾರಣ ನಗರದ ಕನಕದಾಸ ವೃತ್ತದಲ್ಲಿ ಅವರ ಪುತ್ಥಳಿಗೆ ಮಾಲಾರ್ಪಣೆ, ಪೂಜೆ ಸಲ್ಲಿಸಲಾಗುವುದು. ನಂತರ ಅಲ್ಲಿಂದ ಗಾಂಧಿ ವೃತ್ತದ ಮೂಲಕ ಕನಕದಾಸ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ನಡೆಸಲಾಗುವುದು. ನಂತರ ಬಹಿರಂಗ ಸಮಾರಂಭ ನಡೆಯಲಿದೆ. ಜಿಲ್ಲೆಯ ಪ್ರತಿ ತಾಲ್ಲೂಕಿನ ಎಸ್ಸೆಸ್ಸೆಲ್ಸಿ-1, ಪಿಯುಸಿ-3 ಹಾಗೂ ಪದವಿ-3 ಸೇರಿ ಅತಿಹೆಚ್ಚು ಅಂಕ ಪಡೆದ ಕುರುಬ ಸಮುದಾಯದ ಒಟ್ಟು 49 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಸೋಮವಾರ ಹೇಳಿದರು.

ಡಿ.26 ರಂದು 501 ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಹೆಸರು ನೋಂದಾಯಿಸುವವರು ಕಡ್ಡಾಯವಾಗಿ ವಧು-ವರರ ವಯಸ್ಸಿನ ಶಾಲಾ ದೃಢೀಕರಣ, ಜಿಲ್ಲಾ ವೈದ್ಯಾಧಿಕಾರಿಗಳ ಪ್ರಮಾಣಪತ್ರ, ಆಧಾರ್ ಕಾರ್ಡ್ ಸಲ್ಲಿಸಬೇಕು. ಬಾಲ್ಯವಿವಾಹ ಮತ್ತು ಎರಡನೇ ಮದುವೆಗೆ ಅವಕಾಶ ಇರುವುದಿಲ್ಲ. ನ.15 ಹೆಸರು ನೋಂದಾಯಿಸಲು ಕೊನೆಯ ದಿನವಾಗಿದೆ. ಮದುವೆಗೆ ಹೆಸರು ನೋಂದಣಿ ಮಾಡಿದ ಜೋಡಿಗೆ ಸಂಘದಿಂದ ತಾಳಿ, ವಧು-ವರರಿಗೆ ಬಟ್ಟೆ, ಉಡಿತುಂಬುವ ಸಾಮಾನುಗಳು, ಬಾಸಿಂಗ, ದಂಡಿಗಳನ್ನು ನೀಡಲಾಗುವುದು ಎಂದರು.

ADVERTISEMENT

ಅಮೋಘ ಸಿದ್ದೇಶ್ವರ ಮಠ ತುರ್ವಿಹಾಳ 9945648851, ಪೂಜಪ್ಪ ಪೂಜಾರಿ 9448351659, ಎಂ.ಲಿಂಗಪ್ಪ 9449689792, ಫಕೀರಪ್ಪ ತಿಡಿಗೋಳ 9448119718, ನಾಗರಾಜ ಬಾದರ್ಲಿ 8884126669, ರೇವಣಸಿದ್ದಪ್ಪ ಸಂಗಟಿ ಜವಳಗೇರಾ 9916524102 ಅವರ ಬಳಿ ಹೆಸರು ನೋಂದಾಯಿಸಬಹುದು ಎಂದು ಹೇಳಿದರು. ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ತಾಲ್ಲೂಕು ಕ್ರೀಡಾಂಗಣದಲ್ಲಿ ಮಾಡಲು ನಿರ್ಧರಿಸಲಾಗಿದೆ. ಆದರೆ ಅಲ್ಲಿ ಕಾಮಗಾರಿ ನಡೆದಿದ್ದು, ಅದು ಪೂರ್ಣಗೊಂಡರೆ ಅಲ್ಲಿಯೇ ಮಾಡಲಾಗುವುದು. ಇಲ್ಲದಿದ್ದರೆ ಸುಕಾಲಪೇಟೆಯ ಕನಕದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮಾಡಲಾಗುವುದು. ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ತಿಂಥಿಣಿ ಕನಕಗುರು ಪೀಠದ ಸಿದ್ದರಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಕೆ.ಎಸ್.ಈಶ್ವರಪ್ಪ, ಎಂ.ಟಿ.ಬಿ.ನಾಗರಾಜ, ಬಸವರಾಜ ಭೈರತಿ ಮತ್ತಿತರ ಗಣ್ಯರು, ವಿವಿಧ ಮಠಗಳ ಶ್ರೀಗಳಿಗೆ ಆಹ್ವಾನಿಸಲು ಸಂಘದಿಂದ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ತುರ್ವಿಹಾಳ ಅಮೋಘ ಸಿದ್ಧೇಶ್ವರ ಮಠದ ಮಾದಯ್ಯ ಗುರುವಿನ್, ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶಂಭಣ್ಣ ಬಿ, ಕೋಶಾಧ್ಯಕ್ಷ ವೆಂಕೋಬ ಬಿ ಸಾಸಲಮರಿ, ಮಾಜಿ ಅಧ್ಯಕ್ಷ ಭೀಮಣ್ಣ ಸಂಗಟಿ, ಕನಕ ಯುವಸೇನೆ ಅಧ್ಯಕ್ಷ ನಾಗರಾಜ ಬಾದರ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.