ರಾಯಚೂರು: ‘ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನಾಯಕರಿಗೆ ಅಧಿಕಾರದ ಚಿಂತೆ ಇದೆಯೇ ಹೊರತು ಅಭಿವೃದ್ಧಿಯ ಚಿಂತೆಯಿಲ್ಲ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರುಪಾಕ್ಷಿ ಆರೋಪಿಸಿದರು.
ನಗರದ ಐಡಿಎಸ್ಎಂಟಿ ಲೇಔಟ್ನಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಯಚೂರಿನ ಶಾಸಕ ಶಿವರಾಜ ಪಾಟೀಲ, ಕಾಂಗ್ರೆಸ್ನ ಹಿರಿಯು ಮುಖಂಡ ಎನ್.ಎಸ್.ಬೋಸರಾಜು ಮುಂಬರುವ ವಿಧಾನಸಭೆ ಚುನಾವಣೆ ಸಲುವಾಗಿ ಕಿತ್ತಾಡುತ್ತಿದ್ದಾರೆ. ಇಬ್ಬರಿಗೂ ಮುಂದಿನ ಚುನಾವಣೆಯ ಚಿಂತೆ’ ಎಂದರು.
‘ನಗರ ಅಭಿವೃದ್ಧಿ ಹೊಂದಿಲ್ಲ. ಅವರು ಒಂದೇ ನಾಣ್ಯಗಳ ಮುಖಗಳಿದ್ದಂತೆ. ಶಾಸಕ ಡಾ.ಶಿವರಾಜ ಪಾಟೀಲ ಸಾವಿರಾರು ಕೋಟಿ ಅನುದಾನ ತಂದಿದ್ದೇನೆ ಎಂದು ಹೇಳುತ್ತಾರೆ. ಮತ್ತೊಂದೆಡೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ ರಾಯಚೂರು ತೆಲಂಗಾಣ ರಾಜ್ಯಕ್ಕೆ ಸೇರಿಸಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಯಾವುದನ್ನು ನಂಬಬೇಕು’ ಎಂದರು.
‘ನಗರ ಒಳಚರಂಡಿಯ ಯೋಜನೆ ಹಾಗೂ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆಯ ಅನುಷ್ಠಾನದಲ್ಲಿ ನಗರಸಭೆ ವೈಫಲ್ಯ ಬಗ್ಗೆ ಕಾಂಗ್ರೆಸ್ ನಾಯಕರು ಮಾತಾಡುವದಿಲ್ಲ. ಅವರು ಗಮನಹರಿಸುತ್ತಿಲ್ಲ’ ಎಂದು ಅವರು ಹೇಳಿದರು.
‘ಮುಂದಿನ ಚುನಾವಣೆಯಲ್ಲಿ ಜೆಡಿಎಸ್ನಿಂದ ಸಮರ್ಥ ಅಭ್ಯರ್ಥಿಯನ್ನು ಕಣ್ಣಕ್ಕಿಳಿಸಿ ಅಭ್ಯರ್ಥಿಯ ಗೆಲುವಿಗೆ ಸಂಘಟನಾತ್ಮಕ ಪ್ರಯತ್ನ ಮಾಡಲಾಗುವುದು’ ಎಂದು ಅವರು ತಿಳಿಸಿದರು.
ಜೆಡಿಎಸ್ ಪಕ್ಷದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ವಕೀಲ ಎನ್.ಶಿವಶಂಕರ, ಜೆಡಿಎಸ್ ಪಕ್ಷದ ನಗರ ಅಧ್ಯಕ್ಷ ಬಿ ತಿಮ್ಮರೆಡ್ಡಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ, ಗೌರವ ಅಧ್ಯಕ್ಷ ಯೂಫಸ್ ಖಾನ್ ಮಾತನಾಡಿದರು.
ನಗರದ ಕಾರ್ಯಾಧ್ಯಕ್ಷ ದಾನಪ್ಪಯಾದವ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಪವನಕುಮಾರ, ಜಿಲ್ಲಾ ಹಿಂದುಳಿದ ವಿಭಾಗದ ಅಧ್ಯಕ್ಷ ಜಂಬುನಾಥ ಯಾದವ್, ಮುಖಂಡ ರಾಮಕೃಷ್ಣ್ಣ, ರಾಮನಗೌಡ, ಆದಿರಾಜ್ ನಾಗರೆಡ್ಡಿ, ವಾಸುದೇವ ಮಹೇಶತುಪ್ಪದ್, ರಾಮನಗೌಡ ವಿಶ್ವನಾಥಪಟ್ಟಿ, ಬಬಲೂ, ಕಿರಣ ಮಂಚಾಲ, ಅಮ್ಜದ್, ಆಂಜನೇಯ ಯಾದವ್, ಅಲಂಬಾಬು, ಅಮಿತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.