ADVERTISEMENT

ಬದುಕಿಗೆ ಆಸರೆಯಾದ ಮಿಶ್ರ ಬೆಳೆ: 2 ಎಕರೆ ಜಮೀನಿನಲ್ಲಿ ಜೋಳ, ತೊಗರಿ, ಸಜ್ಜೆ ಬೆಳೆ

ಅಮರೇಶ ನಾಯಕ
Published 12 ಮಾರ್ಚ್ 2022, 19:30 IST
Last Updated 12 ಮಾರ್ಚ್ 2022, 19:30 IST
 ಗೆಜ್ಜಲಗಟ್ಟಾ ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿ ಪೇರಲ ಬೆಳೆಯೊಂದಿಗೆ ರೈತ ಶ್ರೀನಿವಾಸ ಸಾನಬಾಳ
 ಗೆಜ್ಜಲಗಟ್ಟಾ ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿ ಪೇರಲ ಬೆಳೆಯೊಂದಿಗೆ ರೈತ ಶ್ರೀನಿವಾಸ ಸಾನಬಾಳ   

ಹಟ್ಟಿ ಚಿನ್ನದಗಣಿ: ಗೆಜ್ಜಲಗಟ್ಟಾ ಗ್ರಾಮದ ಶ್ರೀನಿವಾಸ ಸಾನಬಾಳ ಅವರು ತೋಟಗಾರಿಕೆ ಕೃಷಿ ಮಾಡುವ ಮೂಲಕ ಯಶಸ್ವಿ ರೈತರಾಗಿದ್ದಾರೆ.

ಹಲವು ವರ್ಷಗಳಿಂದ ಹಟ್ಟಿ ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾ, ಎಲ್ಲರಿಗೂ ಪರಿಚಿತರಾಗಿದ್ದ ಶ್ರೀನಿವಾಸ ಅವರು, ಈಗ ತೋಟಗಾರಿಗೆ ಬೆಳೆ ಬೆಳೆಯುವ ಮೂಲಕ ಇತರ ರೈತರಿಗೂ ಮಾದರಿಯಾಗಿದ್ದಾರೆ.

ಗೆಜ್ಜಲಗಟ್ಟಾ ಪಾಮನಕೆಲ್ಲೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಇವರು ತಮ್ಮ 2 ಎಕರೆ ಜಮೀನಿನಲ್ಲಿ ಜೋಳ, ತೊಗರಿ, ಸಜ್ಜೆ, ಸೇರಿದಂತೆ ಮುಂತಾದ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದರು.

ADVERTISEMENT

ನಿರಂತರ ಮಳೆ ಕೊರತೆ ನೀರಿನ ಸಮಸ್ಯೆಯಿಂದ ಬೇಸತ್ತ ಅವರು, ಕೊಳವೆಬಾವಿ ಕೊರಸಿ, ಹನಿ ನೀರಾವರಿ ಪದ್ಧತಿ ಮೂಲಕ ಎರಡು ವರ್ಷದಿಂದ ಜಮೀನಿನಲ್ಲಿ ನಿಂಬೆ, ತೆಂಗು ನುಗ್ಗೆ ಹಾಗೂ ಪೇರಲ ಸೇರಿದಂತೆ ಇತರೆ ಮಿಶ್ರ ಬೆಳೆಯನ್ನು ಬೆಳೆಯುತ್ತಿದ್ದಾರೆ.

ಪೇರಲ ಗಿಡಗಳು ಹಣ್ಣಿನ ಫಸಲು ಹಂತ ತಲುಪಿದೆ. ಪೇರಲ ಹಣ್ಣಿನ ಗಿಡಗಳ ನಿರ್ವಹಣೆ ಹೈದಿನೈದು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳು 1 ಎಕರೆಗೆ ಸುಮಾರು 7 ಸಾವಿರ ಖರ್ಚು ಮಾಡಿದ್ದಾರೆ. ಅವರು ಪ್ರತಿ ಗಿಡದಲ್ಲಿ ಸುಮಾರು 25 ರಿಂದ 30 ಕೆಜಿ ತೂಕದ ಪೇರಲ ಹಣ್ಣುಗಳನ್ನು ಬೆಳೆದಿದ್ದಾರೆ. 1 ಎಕರೆಗೆ 8 ರಿಂದ 9 ಟನ್ ಉತ್ತಮ ಪೇರಲ ಹಣ್ಣಿನ ಫಸಲು ಬರುವ ನಿರೀಕ್ಷೆ ಇದೆ. ಹಣ್ಣುಗಳ ಮಾರಾಟದಿಂದ ₹ 3 ಲಕ್ಷ ಆದಾಯ ಗಳಿಸುವ ವಿಶ್ವಾಸವನ್ನು ಹೊಂದಿದ್ದಾರೆ.

ಗುರುಗುಂಟಾ ಹೋಬಳಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಅತಿ ಹೆಚ್ಚಾಗಿ ಜೋಳ, ತೊಗರಿ, ಸೂರ್ಯಕಾಂತಿ, ಹತ್ತಿ, ಸಜ್ಜೆ, ಶೇಂಗಾ, ಎಳ್ಳು, ಮತ್ತಿತರ ಬೆಳೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಭಾಗದ ಭೂಮಿಯ ಮಣ್ಣು, ಹವಾಗುಣ ತೋಟಗಾರಿಕೆ ಬೆಳೆಗಳಿಗೆ ಪೂರಕವಾಗಿದೆ. ಇತರ ಬೆಳೆಗಳ ನಿರ್ವಹಣೆ ವೆಚ್ಚ ಪರಿಶ್ರಮ ತೋಟಗಾರಿಕೆ ಬೆಳೆಗಳಿಗೆ ಸಮಾನವಾಗಿದೆ. ಆದರೆ ತೋಟಗಾರಿಕೆ ಕೃಷಿಯಲ್ಲಿ ಹೆಚ್ಚು ತಾಳ್ಮೆ ಹಾಗೂ ಬೆಳೆಗಳ ಕುರಿತು ನಿರಂತರ ಕಾಳಜಿ, ಅವಶ್ಯಕ ಎಂದು ಶ್ರೀನಿವಾಸ ಸಾನಬಾಳ ಅವರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.