
ದೇವದುರ್ಗ: ‘ಬಡವರು ಮನೆ ಕಟ್ಟಿಕೊಳ್ಳಲು ಮತ್ತು ದುರಸ್ತಿ ಮಾಡಿಸಲು ಮರಳಿಗೆ ಪರದಾಡುತ್ತಿದ್ದಾರೆ. ಆದರೆ, ರಾತ್ರೋ ರಾತ್ರಿ ಟಿಪ್ಪರ್ಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮರಳು ತುಂಬಿಕೊಂಡು ಸಾಗಾಟ ಮಾಡುತ್ತವೆ. ಬಡವರಿಗೊಂದು, ಶ್ರೀಮಂತರಿಗೆ ಒಂದು ಕಾನೂನು ಇದೆಯೇ?’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಹಿರಿಯ ಭೂ ವಿಜ್ಞಾನಿ ಗೋಪಿನಾಥ ಅವರನ್ನು ಶಾಸಕಿ ಕರೆಮ್ಮ ಜಿ.ನಾಯಕ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು,‘ಬಡವರಿಗೆ ಕಡಿಮೆ ದರ ಹಾಗೂ ಸ್ವಂತ ವಾಹನಗಳಲ್ಲಿ ಮರಳು ಸಾಗಾಣಿಕೆಗೆ ಅವಕಾಶ ಮಾಡಿಕೊಡಬೇಕು. ತಾಲ್ಲೂಕು ಮರಳು ಸಮಿತಿಯಲ್ಲಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮರಳು ಅಕ್ರಮ ಸಾಗಣೆ ತಡೆಗಟ್ಟಲು ಪ್ರಯತ್ನಿಸಬೇಕು’ ಎಂದರು.
‘ಪೊಲೀಸ್ ಇಲಾಖೆ ಮಾತ್ರ ಮುತುವರ್ಜಿ ವಹಿಸಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಚೆಕ್ ಪೋಸ್ಟ್ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಜಾಗೃತ ತಂಡ ಭೇಟಿ ನೀಡಿದ ಕುರಿತು ವರದಿ ನೀಡಬೇಕು’ ಎಂದು ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ ತಾಕೀತು ಮಾಡಿದರು.
‘ಎಸ್ಎಸ್ಎಲ್ಸಿ ಸೇರಿ ಎಲ್ಲಾ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ವಿಶೇಷ ಕಾರ್ಯತಂತ್ರಗಳನ್ನು ರೂಪಿಸಿ, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು’ ಎಂದು ಸೂಚಿಸಿದರು.
ಕೆಡಿಪಿ ಸದಸ್ಯ ಶಿವಪ್ಪ ಪಲಕನಮರಡಿ ಮಾತನಾಡಿ,‘ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸಿಗುತ್ತಿಲ್ಲ. ಸರಿಯಾದ ಸಮಯಕ್ಕೆ ವೈದ್ಯರು ಹಾಜರಾಗುತ್ತಿಲ್ಲ’ ಎಂದು ಆರೋಪಿಸಿದರು.
ಕೆಡಿಪಿ ಸದಸ್ಯ ರಾಮಣ್ಣ ಡಿ.ಕರಡಿಗುಡ್ಡ ಮಾತನಾಡಿ,‘ಸಮಯಕ್ಕೆ ಸರಿಯಾಗಿ ಕೆಡಿಪಿ ಸಭೆಗಳು ನಡೆಯದ ಕಾರಣ ತಾಲ್ಲೂಕಿನ ಜಲ್ವಂತ ಸಮಸ್ಯೆಗಳ ಚರ್ಚೆ ಆಗುತ್ತಿಲ್ಲ ಅಭಿವೃದ್ಧಿ ಕಾಮಗಾರಿಗಳು ಹಾದಿ ತಪ್ಪಿವೆ’ ಎಂದು ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಎಪಿಎಂಸಿ ಅಧ್ಯಕ್ಷ ಆದನಗೌಡ ಪಾಟೀಲ ಮಾತನಾಡಿ,‘ತಾಲ್ಲೂಕಿನಲ್ಲಿ ನಂಬರ್ ಪ್ಲೇಟ್, ಚೆಸ್ಸಿ ನಂಬರ್ ಇಲ್ಲದ ಟಿಪ್ಪರ್ಗಳು ತಿರುಗಾಡುತ್ತಿವೆ. ಮರಳು ಅಕ್ರಮ ಸಾಗಣೆಗೆ ಕಡಿವಾಣ ಹಾಕಿದ್ದೇವೆ ಎಂದು ಹೇಳುತ್ತಿರುವಿರಿ. ₹70 ಸಾವಿರ ಕೊಡಿ ನಾನೇ ನಿಮಗೆ ಒಂದು ಟಿಪ್ಪರ್ ಮರಳು ಕೊಡಿಸುತ್ತೇನೆ’ ಎಂದು ಸಭೆಗೆ ಸವಾಲು ಹಾಕಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ ಜ್ಯೋತಿ ಮಾತನಾಡಿ,‘ಬಡವರು ಮನೆ ಕಟ್ಟಿಕೊಳ್ಳಲು ಸಾಲ ಮಾಡಿ, ಅದನ್ನು ತೀರಿಸಲು ಬೆಂಗಳೂರಿಗೆ ದುಡಿಯಲು ಹೋಗುವ ಪರಿಸ್ಥಿತಿ ಬಂದಿದೆ’ ಎಂದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಶರಣಗೌಡ ಹಂಚಿನಾಳ, ಜಿ.ಪಂ.ಯೋಜನಾಧಿಕಾರಿ ಶರಣಬಸವರಾಜ ಕೆಸರಟ್ಟಿ, ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ, ಅರಕೇರಾ ತಹಶೀಲ್ದಾರ್ ಅಮರೇಶ ಬಿರಾದಾರ, ತಾ.ಪಂ ಇಒಗಳಾ ಬಸವರಾಜ ಹಟ್ಟಿ, ಅಣ್ಣಾರಾವ್, ಕೆಡಿಪಿ ಸದಸ್ಯರಾದ ಬಸನಗೌಡ ಯಾಟಗಲ್ ಹಾಗೂ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.