ADVERTISEMENT

ಮೊಸರನ್ನ ಬಾನ–ಬುತ್ತಿ; ಪ್ರಸಾದ ವಿತರಣೆ

​ಪ್ರಜಾವಾಣಿ ವಾರ್ತೆ
Published 24 ಮೇ 2022, 11:27 IST
Last Updated 24 ಮೇ 2022, 11:27 IST
ಶಕ್ತಿನಗರ ಬಳಿಯ ದೇವಸೂಗೂರಿನ ಸೂಗೂರೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ನಡೆದ ಮೊಸರನ್ನ ಬಾನ–ಬುತ್ತಿ ಕಾರ್ಯಕ್ರಮದಲ್ಲಿ ಊಟ ಮಾಡಿದ ಭಕ್ತರು
ಶಕ್ತಿನಗರ ಬಳಿಯ ದೇವಸೂಗೂರಿನ ಸೂಗೂರೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ನಡೆದ ಮೊಸರನ್ನ ಬಾನ–ಬುತ್ತಿ ಕಾರ್ಯಕ್ರಮದಲ್ಲಿ ಊಟ ಮಾಡಿದ ಭಕ್ತರು   

ಶಕ್ತಿನಗರ: ದೇವಸೂಗೂರಿನ ಸೂಗೂರೇಶ್ವರ ದೇಗುಲದ ಆವರಣದಲ್ಲಿ ಸೋಮವಾರ ಮೊಸರು ಬಾನ– ಬುತ್ತಿ ನೈವೇದ್ಯ ಸಮರ್ಪಣೆ, ಪ್ರಸಾದ ವಿತರಣೆಯ ಧಾರ್ಮಿಕ ಸಮಾರಂಭವು ತ್ರಿಂದಶ ಅರ್ಚಕರ ನೇತೃತ್ವದಲ್ಲಿ ಸಂಭ್ರಮದಿಂದ ನಡೆಯಿತು.

ಖಡಕ್ ಜೋಳದ ರೊಟ್ಟಿ, ಬದನೆಕಾಯಿ ಪಲ್ಲೆ, ಅಂಬ್ರೆಕಾಳು, ಅಂಬಲಿ, ಉಳ್ಳಾಗಡ್ಡಿ ಚಟ್ನಿ, ಮೊಸರನ್ನ ಸೇರಿದಂತೆ ವಿವಿಧ ಖಾದ್ಯಗಳನ್ನು ದೇವಸ್ಥಾನಕ್ಕೆ ಭಕ್ತರು ತಂದು ಜಂಗಮರೊಂದಿಗೆ ಊಟ ಮಾಡಿದರು.

ಹಿನ್ನೆಲೆ: ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದ ಬಸವಣ್ಣನವರು ಒಂದು ಲಕ್ಷದ ತೊಂಬತ್ತಾರು ಸಾವಿರ ಜಂಗಮರಿಗೆ ನಿತ್ಯ ಪ್ರಸಾದವನ್ನು ಮಾಡುವ ಸಂಕಲ್ಪ ಮಾಡಿದ್ದರು. ಅವರ ಸಂಕಲ್ಪಕ್ಕೆ ಇನ್ನೂ ಆರು ಸಾವಿರ ಜಂಗಮರು ಕಡಿಮೆಯಾಗಿದ್ದರು. ಆ ಜಂಗಮರು ಕಾಶ್ಮೀರದ ಮಹಾದೇವರಸ ಮುದ್ರೆಯ ಮನೆಯಲ್ಲಿರುವ ವಿಚಾರ ತಿಳಿಯಿತು. ಆದರೆ, ಬಸವಣ್ಣನವರು ಆರು ಸಾವಿರ ಜಂಗಮರನ್ನು ಕರೆ ತರುವ ಬಗ್ಗೆ ಚಿಂತೆಗೊಳಗಾದರು.ಆಗ ಅಲ್ಲಿಂದ ಅವರನ್ನು ಹೇಗೆ ಕರೆತರುವುದು ಎಂಬ ಯೋಚನೆಯಲ್ಲಿರುವಾಗ ಪ್ರಸಾದ ಮೂಲಕ ಕರೆತರಬೇಕು ಎನ್ನುವ ತೀರ್ಮಾನಕ್ಕೆ ಬಂದು, ಮೊಸರನ್ನ ಬಾನ ಮಾಡಿಕೊಂಡ ಅನ್ನದ ರೂಪದಲ್ಲಿ ಕರೆತರಲಾಯಿತು. ಆಗ ಸೂಗೂರೇಶ್ವರ ಸ್ವಾಮಿಯ ಜತೆಯಲ್ಲಿ ಜಂಗಮರು ಬಂದ ಪ್ರತೀಕವಾಗಿ ಮೊಸರಬಾನ ಬುತ್ತಿ ಸ್ವೀಕರಿಸಿದರು. ಇದು ಇಂದಿಗೂ ಆಚರಣೆಯಲ್ಲಿದೆ.

ADVERTISEMENT

'ಸೂಗೂರೇಶ್ವರ ಸ್ವಾಮಿ ಜಂಗಮ ಸ್ವರೂಪಿಯಾಗುತ್ತಾನೆ. ದೇವರಿಗೆ ನದಿ ಸ್ಥಾನದ ನಂತರ ಮಹಾಭಿಷೇಕ ಮಾಡಲಾಗುತ್ತಿದೆ. ಕಾವಿಧಾರಣೆ ಮಾಡಿ ಜೋಳಿಗೆಯಲ್ಲಿ ಅಕ್ಕಿ ಹಾಕುವ ಮೂಲಕ ನೈವೇದ್ಯ ಮಾಡಲಾಗುತ್ತದೆ. ವಚನಕಾರರ ದಾಸೋಹ ಪದ್ಧತಿ ಆಚರಣೆ ಸಂದರ್ಭದಲ್ಲಿ ಜಂಗಮರಿಗೆ ಮೊಸರನ್ನ ಬಾನ ಬುತ್ತಿ ಉಣ ಬಡಿಸಲಾಗುತ್ತಿತ್ತು. ಇದು ಇಂದಿಗೂ ನಡೆದುಕೊಂಡು ಬಂದಿದೆ’ ಎನ್ನುತ್ತಾರೆ ಗ್ರಾಮಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.